ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರ ಬಾಯಿಯಿಂದ ಅಣಿಮುತ್ತುಗಳೇ ಉದುರುತ್ತಿದೆ. ಒಬ್ಬರ ಹಿಂದೆ ಒಬ್ಬರು ಲಗಾಮಿಲ್ಲದಂತೆ ನಾಲಿಗೆ ಹರಿ ಬಿಡುತ್ತಿದ್ದಾರೆ. ಇದೀಗ ಸದಾ ಒಂದಿಲ್ಲೊಂದು ಹೇಳಿಕೆಯಿಂದ ಸುದ್ದಿಯಾಗುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಸರದಿ.
ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರು ರಾಮ ಮತ್ತು ಹನುಮಾನ್ ಭಕ್ತರೇ ಅಥವಾ ಟಿಪ್ಪುವಿನ ಭಜನೆಗಳನ್ನು ಹಾಡುತ್ತಾರಾ ಎಂದು ಪ್ರಶ್ನಿಸಿದರು. ‘ನಾವು ರಾಮ ಮತ್ತು ಹನುಮಂತನ ಭಕ್ತರು. ನಾವು ಟಿಪ್ಪುವಿನ ವಂಶಸ್ಥರಲ್ಲ, ನಾವು ಅವನ ವಂಶಸ್ಥರನ್ನು ವಾಪಸ್ ಕಳುಹಿಸಿದ್ದೇವೆ. ಆದ್ದರಿಂದ ನಾನು ಯಲಬುರ್ಗಾದ ಜನರನ್ನು ಕೇಳುತ್ತೇನೆ, ನೀವು ಹನುಮಂತನನ್ನು ಪೂಜಿಸುತ್ತೀರಾ ಅಥವಾ ಟಿಪ್ಪುವಿನ ಭಜನೆಗಳನ್ನು ಹಾಡುತ್ತೀರಾ? ಟಿಪ್ಪುವಿನ ಭಜನೆಗಳನ್ನು ಹಾಡುವ ಜನರನ್ನು ನೀವು ಓಡಿಸುತ್ತೀರಾ? ಅಂತ ಪ್ರಶ್ನೆ ಮಾಡಿದ್ದಾರೆ.ಅಲ್ಲದೇ ಟಿಪ್ಪು ಸುಲ್ತಾನ್ ವಂಶಸ್ಥರು ಮತ್ತು ರಾಮ ಮತ್ತು ಹನುಮಾನ್ ಭಕ್ತರ ನಡುವೆ ಚುನಾವಣೆ ಸ್ಪರ್ಧೆ ಇದೆ ಎನ್ನುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ.