ಮಂಗಳೂರು: ದಕ್ಷಿಣ ಕನ್ನಡ ನಿರ್ಗಮಿತ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಅವರಿಗೆ ವಾಟ್ಸಪ್ ಗ್ರೂಪ್ನಲ್ಲಿ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಮೂಡುಬಿದಿರೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಈ ಸಂಬಂಧ ಬಜ್ಪೆ ಸಮೀಪದ ನಿವಾಸಿ ರಂಜಿತ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
‘ರಾಮ್ ಸೇನಾ ಅಭಿಮಾನಿಗಳು’ ಎಂಬ ವಾಟ್ಸ್ಆಯಪ್ ಗುಂಪಿನಲ್ಲಿ ಮಂಗಳವಾರ ಬೆದರಿಕೆ ಹಾಕಲಾಗಿತ್ತು. ‘ಇವಳನ್ನು ಮೊದಲು ಕಡಿದು ಕೊಲ್ಲಬೇಕು’ ಎಂದು ಜಿಲ್ಲಾಧಿಕಾರಿ ಅವರನ್ನುದ್ದೇಶಿಸಿ ತುಳು ಭಾಷೆಯಲ್ಲಿ ಬೆದರಿಕೆ ಸಂದೇಶ ಹಾಕಲಾಗಿತ್ತು.
ಅಕ್ರಮ ಗೋ ಸಾಗಾಟ ಸಂದರ್ಭದಲ್ಲಿ ಕಾನೂನು ಕೈಗೆತ್ತಿಕೊಳ್ಳದಂತೆ ಮೊನ್ನೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಿಂಧು ಬಿ ರೂಪೇಶ್ ಎಚ್ಚರಿಕೆ ನೀಡಿದ್ದರು. ಮಾತ್ರವಲ್ಲದೆ ಹಲ್ಲೆ ಅಥವಾ ಸಂಘರ್ಷ ನಡೆಸುವುವವರ ವಿರುದ್ಧವೂ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದರು.