ಬೆಳಗಾವಿ: ಪುತ್ತೂರು ಮೂಲದ ಕೊಲೆ ಆರೋಪಿ ಬೆಳಗಾವಿಯಲ್ಲಿ ಕೋರ್ಟ್ ಹಾಲ್ ನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಘಟನೆ ಇಂದು ನಡೆದಿದೆ.
ಬೆಳಗಾವಿಯ 4ನೇ ಜೆಎಂಎಫ್ ಸಿ ಕೋರ್ಟ್ ಹಾಲ್ ಬಳಿ ಆರೋಪಿ ಜಯೇಶ್ ಪೂಜಾರಿ ಇಂದು ಕೋರ್ಟ್ ಗೆ ಹಾಜರುಪಡಿಸಿದ್ದ ಸಂಧರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ವಕೀಲರು ಮತ್ತು ಸಾರ್ವಜನಿಕರು ಆರೋಪಿಗೆ ಥಳಿಸಿದ್ದಾರೆ.
ಜಯೇಶ್ ಪೂಜಾರಿ ಶಾಕೀರ್ ಮೊಹಮ್ಮದ್ ಆಗಿ ಮತಾಂತರವಾಗಿದ್ದು, ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಬಂಧಿಯಾಗಿ ಇದ್ದಾನೆ. 2018ರಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಗೆ ಬೆದರಿಕೆ ಹಾಕಿದ್ದ ಸಂಬಂಧ ಬೆಳಗಾವಿಯ
ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪ್ರಕರಣ ಸಂಬಂಧ ವಿಚಾರಣೆಗೆ ಇಂದು ಕೋರ್ಟ್ ಗೆ ಹಾಜರುಪಡಿಸಿದ್ದಾಗ ಘೋಷಣೆ ಕೂಗಿದ್ದಾನೆ.
ಜಯೇಶ್ ಪೂಜಾರಿ ವಿರುದ್ಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಎಡಿಜಿಪಿ ಅಶೋಕ್ ಕುಮಾರ್ ಅವರಿಗೆ ಫೋನ್ ಮೂಲಕ ಬೇದರಿಕೆ ಹಾಕಿರುವ ಪ್ರಕರಣಗಳು ಇದ್ದು, ದಕ್ಷಿಣ ಕನ್ನಡದ ಡಬಲ್ ಮರ್ಡರ್ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟಿದೆ.
ಇದೀಗ ಪಾಕಿಸ್ತಾನದ ಪರ ಘೋಷಣೆ ಸಂಬಂಧ ಜಯೇಶ್ ಪೂಜಾರಿ ವಿರುದ್ಧ ಪ್ರಕರಣ ದಾಖಲಿಸಲು ಬೆಳಗಾವಿ ಪೊಲೀಸರು ಮುಂದಾಗಿದ್ದಾರೆ.