ಮುಲ್ಕಿ: ಇಲ್ಲಿನ ಪ್ರಸಿದ್ಧ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದ ಕಾಣಿಕೆ ಹುಂಡಿ ಒಡೆದು ಕಳ್ಳತನ ಮಾಡಿದ್ದ ಆರೋಪಿಯನ್ನು ಮುಲ್ಕಿ ಪೊಲೀಸರು ಬಂಧಿಸಿ, ಕಳುವಾಗಿದ್ದ ನಗದನ್ನು ವಶಪಡಿಸಿಕೊಂಡಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಅಯ್ಯಂಗೇರಿ ನಿವಾಸಿ ರವಿಕುಮಾರ್ ಅಲಿಯಾಸ್ ರವಿ ಹೆಚ್.ಜಿ. (20) ಬಂಧಿತ ಆರೋಪಿ.
ಘಟನೆಯ ವಿವರ: ದಿನಾಂಕ 18-08-2026ರ ಮಧ್ಯರಾತ್ರಿ ದೇವಸ್ಥಾನದ ಮಾಡಿನ ಮೇಲಿದ್ದ ಜಾಲರಿಯ ಮೂಲಕ ಒಳಪ್ರವೇಶಿಸಿದ್ದ ಆರೋಪಿ, ಸಿಟಿವಿ ಕ್ಯಾಮೆರಾವನ್ನು ಬದಿಗೆ ತಿರುಗಿಸಿ ಕಾಣಿಕೆ ಹುಂಡಿಯ ಬೀಗ ಮುರಿದು ನಗದು ಕಳವು ಮಾಡಿದ್ದನು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಮುಲ್ಕಿ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡವು ಆರೋಪಿಯನ್ನು ಬಂಧಿಸಿ, ಆತನಿಂದ ಕಳವು ಮಾಡಿದ್ದ 2,195 ರೂಪಾಯಿ ನಗದನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಬಂಧಿತ ಆರೋಪಿ ರವಿಕುಮಾರ್ ವಿರುದ್ಧ ಈ ಹಿಂದೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಲು ಸಾಲು ಕಳ್ಳತನ ಮತ್ತು ವಿವಿಧ ಅಪರಾಧಗಳಿಗೆ ಸಂಬಂಧಿಸಿದಂತೆ 5 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.


