ಮಂಗಳೂರು: ಶಿಕ್ಷಣ ಸಂಸ್ಥೆಯ ತರಗತಿ ಕೊಠಡಿಗಳಿಗೆ ಇಟ್ಟಿರುವ ಮುನಿಗಳು, ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳು, ನಮ್ಮ ಪರಂಪರೆ, ಆಧ್ಯಾತ್ಮಿಕತೆ ಮುಂದುವರಿಯುವ ಸಂಕೇತವಾಗಿದೆ. ಇದು ಸಂಸ್ಥೆಯ ಶಿಕ್ಷಣದ ಶ್ರೇಷ್ಠತೆಯನ್ನು ತಿಳಿಸುತ್ತದೆ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಟ್ಠಲದಾಸ ಸ್ವಾಮೀಜಿ ಹೇಳಿದರು.
ಅವರು ನಗರದ ಕೊಟ್ಟಾರ ಬಂಗ್ರಕೂಳೂರಿನ ಪೋದಾರ್ ಇಂಟರ್ ನ್ಯಾಶನಲ್ ಸ್ಕೂಲ್ನ ಹತ್ತಿರದ ಗಣೇಶ್ ಭಾಗ್ ಲೇಔಟ್ನ ವಿದ್ಯಾರ್ಥಿ ಗ್ರಾಮದಲ್ಲಿ ತ್ರಿಶಾ ಪದವಿ ಕಾಲೇಜಿನ ನೂತನ ಕಟ್ಟಡವನ್ನು ಶುಕ್ರವಾರದಂದು ಉದ್ಘಾಟಿಸಿ ಮಾತನಾಡಿದರು.
ಮನುಷ್ಯತ್ವ ಶಿಕ್ಷಣದಿಂದ ನಿರ್ಮಾಣವಾಗಬೇಕು. ಸಾಮಾಜಿಕವಾಗಿ ಉತ್ತಮ ಫಲಿತಾಂಶ ಶೈಕ್ಷಣಿಕ ಫಲಿತಾಂಶಕ್ಕಿಂತ ಮುಖ್ಯ. ತ್ರಿಶಾ ಕಾಲೇಜಿನ ಕ್ಯಾಂಪಸ್ನೊಳಗೆ ಕಾಲಿರಿಸುತ್ತಿದ್ದಂತೆ ಮನಸ್ಸಿಗೆ ಆಹ್ಲಾದಕರ ಭಾವನೆ ಮೂಡಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಜತೆ ವ್ಯಕ್ತಿತ್ವ ರೂಪಿಸುವ ಕೆಲಸ ಆಗಬೇಕು. ತರಗತಿಯಲ್ಲಿ ಕುಳಿತುಕೊಳ್ಳುವ ವಿದ್ಯಾರ್ಥಿಗಳು ಬಲಿಷ್ಠವಾದರೆ ದೇಶ ಬಲಿಷ್ಠವಾಗಲು ಸಾಧ್ಯ. ಇದಕ್ಕೆ ಪೂರಕವಾದ ಶಿಕ್ಷಣವನ್ನು ತ್ರಿಶಾ ಸಂಸ್ಥೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ತ್ರಿಶಾ ಸಮೂಹ ಸಂಸ್ಥೆಯ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಅವರು ಮಾತನಾಡಿ, ಮೌಲ್ಯಾಧಾರಿತ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವ ಗುಣವನ್ನು ಬೆಳೆಸುವಲ್ಲಿ ತ್ರಿಶಾ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದು ತ್ರಿಶಾ ಶಿಕ್ಷಣ ಸಮೂಹದ ಮಂಗಳೂರಿನ ಹೊಸ ಕ್ಯಾಂಪಸ್ ವಿದ್ಯಾರ್ಥಿಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ, ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಡಾ. ಭರತ್ ಶೆಟ್ಟಿ ವೈ., ಡಿ.ವೇದವ್ಯಾಸ ಕಾಮತ್, ಮೈಸೂರು ಎಂಜಿಬಿ ವಕನ ಪ್ರಮೋಟರ್ ಗೋವಿಂದ ಜಗನಾಥ ಶೆಣೈ, ದೀಕ್ಷಾ ಸಂಸ್ಥೆಯ ಸ್ಥಾಪಕ ಡಾಣ ಶ್ರೀಧರ್ ಜಿ., ಐಸಿಎಐನ ಎಸ್ಐಆರ್ಸಿ ಮಂಗಳೂರು ಶಾಖೆಯ ಅಧ್ಯಕ್ಷ ಗೌತಮ್ ಪೈ ಡಿ., ಕೆ೨ ಲರ್ನಿಂಗ್ ಸಂಸ್ಥಾಪಕ ಶ್ರೀಪಾಲ್ ಜೈನ್, ಐಸಿಐಸಿಐ ಬ್ಯಾಂಕ್ನ ವಲಯ ಮುಖ್ಯಸ್ಥ ಶಶಿಕುಮಾರ್ ಎನ್., ಕಾರ್ಪೊರೇಟರ್ ಕಿರಣ್ ಕುಮಾರ್ ಕೋಡಿಕಲ್, ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಡಾ. ನಾರಾಯಣ್ ಕಾಯರ್ಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಕಳದ ಜ್ಞಾನಸುಧಾ ಸಂಸ್ಥಾಪಕ ಡಾ. ಸುಧಾಕರ್ ಶೆಟ್ಟಿ, ಪ್ರಮುಖರಾದ ನರಸಿಂಹ ಶೆಣೈ, ಸಿದ್ಧಾಂತ ಫೌಂಡೇಶನ್ನ ಆಡಳಿತ ಟ್ರಸ್ಟಿ ರಾಮ್ ಪ್ರಭು, ತ್ರಿಶಾ ಕಾಲೇಜಿನ ಪ್ರಾಂಶುಪಾಲ ಟ್ರಸ್ಟಿ ನಮಿತಾ ಗೋಪಾಲಕೃಷ್ಣ ಭಟ್, ಪ್ರಾಂಶುಪಾಲ ಮಂಜುನಾಥ ಕಾಮತ್ ಎಂ. ತ್ರಿಶಾ ಕ್ಲಾಸಸ್ ಮಂಗಳೂರು ಸೆಂಟರ್ ಹೆಡ್ ಯಶಸ್ವಿನಿ ಯಶ್ಪಾಲ್ ಮೊದಲಾದವರು ಉಪಸ್ಥಿತರಿದ್ದರು.
ಪ್ರೊ. ಸಹನಾ ಶೆಟ್ಟಿ ಸಂಸ್ಥೆ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ಸಂಧ್ಯಾ ಕಾಲೇಜು ಪ್ರಾಂಶುಪಾಲರಾದ ಪ್ರೊ. ಸುಪ್ರಭಾ ಎಂ. ಸ್ವಾಗತಿಸಿದರು.