ನವದೆಹಲಿ: ಗೈಲ್ ಇಂಡಿಯಾ ಕಂಪೆನಿಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ಸಂಬಂಧ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಕೇಂದ್ರ ಪೆಟ್ರೋಲಿಯಂ ಇಲಾಖೆ ಸಚಿವ ಹರದೀಪ್ ಸಿಂಗ್ ಪುರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಹಿಂದಿನ ಜಿಬಿಎಫ್ ನಲ್ಲಿದ್ದ ಎಲ್ಲರಿಗೂ ಉದ್ಯೋಗ ಹಾಗೂ ಎಂಎಸ್ಇಝೆಡ್ ಸ್ಥಾಪನೆಗೆ ಜಮೀನು ನೀಡಿ ಸ್ಥಳಾಂತರಗೊಂಡ 115 ಮಂದಿ ಪಡೆದಿದ್ದ ಉದ್ಯೋಗ ಹಾಗೂ ನೇರ ನೇಮಕಾತಿಗೊಂಡ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಮನವಿ ಸಲ್ಲಿಸಲಾಗಿದೆ.
ನವದೆಹಲಿಯಲ್ಲಿ ಇಂದು ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಅವರನ್ನು ಭೇಟಿ ಮಾಡಿದ್ದ ನಳೀನ್ ಕುಮಾರ್ ಕಟೀಲ್ ಲಿಖಿತ ಮನವಿ ಸಲ್ಲಿಸಿದ್ದಾರೆ.
ಎಂಎಸ್ಇಝೆಡ್ ಸ್ಥಾಪನೆಗೆ ಸ್ಥಳ ನೀಡಿದ್ದ ನೆಲೆಯಲ್ಲಿ ಕೆಲಸ ನೀಡಲಾಗಿದ್ದ ಎಲ್ಲಾ ಉದ್ಯೋಗಿಗಳಿಗೂ ಯಾವುದೇ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸದೇ ಉದ್ಯೋಗ ನೀಡುವುದು ಹಾಗೂ ಜೆಬಿಎಫ್ ಪಿಎಲ್ ನಲ್ಲಿ ನೇರ ನೇಮಕಾತಿ ಮೂಲಕ ಉದ್ಯೋಗಿಗಳಾಗಿದ್ದ ಸ್ಥಳೀಯರಿಗೆ ಖಾಯಂ ಉದ್ಯೋಗಕ್ಕಾಗಿ ಮನವಿ ಮಾಡಲಾಗಿದೆ.
ಸಂಸದ ನಳೀನ್ ಕುಮಾರ್ ಕಟೀಲ್ ಮನವಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.