ಬೆಳ್ತಂಗಡಿ: ಅಲ್ಪಕಾಲದ ಅನಾರೋಗ್ಯದಿಂದಾಗಿ ತಾ.ಪಂ ಮಾಜಿ ಅಧ್ಯಕ್ಷ ಜತ್ತನ್ನ ಗೌಡ ಅವರ ಪುತ್ರ, ಬೆಳಾಲು ಗ್ರಾ. ಪ. ಮಾಜಿ ಅಧ್ಯಕ್ಷ ಏರ್ದೋಟ್ಟು ಮೋಹನ ಗೌಡ (48) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ಕೊನೆಯುಸಿರೆಳೆದಿದ್ದಾರೆ.
ಕಳೆದ ಕೆಲವು ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪಿತ್ತಕಾಮಾಲೆ ರೋಗಕ್ಕೆ ಚಿಕಿತ್ಸೆಗೆ ಪಡೆಯುತ್ತಿದ್ದು, ಈ ಮಧ್ಯೆ ಅವರ ಆರೋಗ್ಯ ಸ್ಥಿತಿ ವಿಷಮಿಸಿ ಬಹುಅಂಗಾಂಗ ವೈಫಲ್ಯಕ್ಕೊಳಗಾಗಿದ್ದರು.
ಉದ್ಯಮಿಯಾಗಿದ್ದ ಮೋಹನ ಗೌಡ ಅವರಿ ಬೆಳಾಲಿನಲ್ಲಿ ಅಕ್ಕಿ ಮಿಲ್ಲು ನಡೆಸುತ್ತಿದ್ದರು. ಸಾಮಾಜಿಕವಾಗಿ , ಧಾರ್ಮಿಕವಾಗಿ ತನ್ನನ್ನು ತೊಡಗಿಸಿಕೊಂಡಿದ್ದ ಅವರು ಬೆಳಾಲಿನ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷರಾಗಿ, ಕಾಂಗ್ರೆಸ್ ಪಕ್ಷದ ಗ್ರಾಮ ಸಮಿತಿಯ ಅಧ್ಯಕ್ಷರಾಗಿ, ಶ್ರೀ ಅನಂತಪದ್ಮನಾಭ ದೇವಸ್ಥಾನ, ಅನಂತೋಡಿ ಇದರ ಜೀರ್ಣೋದ್ಧಾರ ಕಾರ್ಯದಲ್ಲಿ ಅಹೋರಾತ್ರಿ ಶ್ರಮಿಸಿ ಅಲ್ಲಿ ಖಾಯಂ ಆಹ್ವಾನಿತ ಸದಸ್ಯರಾಗಿ, ಮೈತ್ರಿ ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿ, ಪ್ರಸ್ತುತ ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷರೂ ಆಗಿದ್ದರು.
ಮೃತರ ಪಾರ್ಥವ ಶರೀರ ಸೋಮವಾರ ಬೆಳಿಗ್ಗೆ 8.00 ಕ್ಕೆ ಬೆಳಾಲಿನ ಅವರ ಅಕ್ಕಿ ಮಿಲ್ಲಿನ ವಠಾರಕ್ಕೆ ತರಲಾಗಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ ಎಂದು ಅವರ ಸಹೋದರ, ನೋಟರಿ ಪಬ್ಲಿಕ್ ನ್ಯಾಯವಾದಿ ಶ್ರೀನಿವಾಸ ಗೌಡ ತಿಳಿಸಿದ್ದಾರೆ.
ಮೃತರು ತಂದೆ, ತಾಯಿ, ಪತ್ನಿ ಇಬ್ಬರು ಮಕ್ಕಳು, ಮೂವರು ಸಹೋದರರು ಮತ್ತು ಒಬ್ಬಳು ಸಹೋದರಿ ಹಾಗೂ ಬಂದು ವರ್ಗದವರನ್ನು ಅಗಲಿದ್ದಾರೆ.