ಬೆಂಗಳೂರು: ಧರ್ಮಸ್ಥಳದಲ್ಲಿ ಎಸ್ಐಟಿ ಶೋಧ ವಿಚಾರದಲ್ಲಿ ದೂರುದಾರನ ಹಿನ್ನೆಲೆ ಪರಿಶೀಲನೆ ಮಾಡಿದ್ದೀರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರಶ್ನೆ ಮಾಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಹೇಳಿಕೆ ನೀಡಿದ ಸಿ.ಟಿ. ರವಿ, ಎಡಪಂಥೀಯ ಸಂಘಟನೆಗಳ ಒತ್ತಡದಿಂದ ಎಸ್ಐಟಿ ರಚನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದು, ದೂರಿನ ಸತ್ಯಾಸತ್ಯತೆ ಪರಿಶೀಲನೆ ಮಾಡಿ ಎಸ್ಐಟಿ ಮಾಡಿದ್ದೀರೋ ಅಥವಾ ಪರವಾಗಿ ಬಂದ ಒತ್ತಡಕ್ಕೆ ರಚನೆ ಮಾಡಿದ್ದೀರೋ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ, ಧರ್ಮಸ್ಥಳದ ಘನತೆಗೆ ಹಾನಿ ಉಂಟು ಮಾಡುವುದು ಎಸ್ಐಟಿ ತನಿಖೆಯ ಉದ್ದೇಶವೋ ಎಂದು ಕೇಳಿರುವ ಎಂಎಲ್ಸಿ ಸಿ.ಟಿ. ರವಿ, ಎಸ್ ಐಟಿ ಮಧ್ಯಂತರ ವರದಿ ಯಾವಾಗ ಬಿಡುಗಡೆ ಮಾಡುತ್ತದೆ ಎಂದು ಕೇಳಿದ್ದಾರೆ.
ಇದೇ ವೇಳೆ, ಕೆಲವು ಶಿಕ್ಷಣವನ್ನು ಮಾರಾಟ ಮಾಡುವ ಉದ್ದೇಶವನ್ನಿಟ್ಟುಕೊಂಡಿರುವ ಖಾಸಗಿ ವಿದ್ಯಾಸಂಸ್ಥೆಗಳು ಆರೋಪದ ಹಿಂದೆ ಇವೆ ಎಂಬ ಅನುಮಾನ ಇದೆ ಎಂದಿರುವ ರವಿ, ನಗರ ನಕ್ಸಲರು ಕೂಡಾ ಈ ಸಂಚಿಗೆ ಕೈ ಜೋಡಿಸಿರುವ ಅನುಮಾನ ಇದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಮೌನ ವಹಿಸಿದರೆ ಕಾಂಗ್ರೆಸ್ ಜೊತೆಗೆ ಎಸ್ಡಿಪಿಐನಂತಹ ಮತಾಂಧ ಶಕ್ತಿಗಳು ಧರ್ಮಸ್ಥಳದ ವಿರುದ್ಧ ಸಂಚು ನಡೆಸಿದ್ದಾರೆ ಎಂಬ ಅನುಮಾನ ಬರುತ್ತದೆ, ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಗ್ರಹಿಸಿದ್ದಾರೆ.


