ಮಂಗಳೂರು: ನಾಗುರಿಯಲ್ಲಿ ನಡೆದ ಕುಕ್ಕರ್ ಸ್ಫೋಟದಲ್ಲಿ ಗಂಭೀರ ಗಾಯಗೊಂಡಿರುವ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಗೆ ಹೊಸ ಆಟೊ ರಿಕ್ಷಾ ಮತ್ತು 5 ಲಕ್ಷ ರೂ.ವನ್ನು ಕೆಲವೇ ದಿನದೊಳಗೆ ನೀಡಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
ಪುರುಷೋತ್ತಮ ಪೂಜಾರಿಯ ಮನೆಗೆ ಮಂಗಳವಾರ ಭೇಟಿ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾತನಾಡಿದ ಅವರು ವೈಯಕ್ತಿಕ ನೆಲೆಯಲ್ಲಿ ತಾನು ಹೊಸ ಆಟೊ ರಿಕ್ಷಾ ನೀಡುತ್ತೇನೆ. ಪುರುಷೋತ್ತಮರ ಬಳಿಯಿರುವ ಹಳೆಯ ಪರ್ಮಿಟ್ನ ಆಧಾರದಲ್ಲಿ ಹೊಸ ಆಟೊ ರಿಕ್ಷಾಕ್ಕೆ ಪರ್ಮಿಟ್ ವ್ಯವಸ್ಥೆ ಮಾಡಲು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆಟೋರಿಕ್ಷಾ ನೀಡುವಾಗ ಬಿಜೆಪಿ ವತಿಯಿಂದ 5 ಲ.ರೂ.ವನ್ನು ನೀಡಲಾಗುವುದು ಎಂದು ವೇದವ್ಯಾಸ ಕಾಮತ್ ಹೇಳಿದರು.
ಸರಕಾರದಿಂದ ದೊರೆಯುವ ಪರಿಹಾರಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಸುನಿಲ್ ಕುಮಾರ್ ಮುಖ್ಯಮಂತ್ರಿಯ ಗಮನ ಸೆಳೆದಿದ್ದಾರೆ. ಹಾಗಾಗಿ ಆ ಪರಿಹಾರ ಕೂಡ ಶೀಘ್ರ ಬಿಡುಗಡೆಯಾಗಲಿದೆ. ಚಿಕಿತ್ಸಾ ವೆಚ್ಚ ಭರಿಸುವುದು ಬೇಡ ಎಂದಿದ್ದೆವು. ಪುರುಷೋತ್ತಮ ಪೂಜಾರಿಯ ಪುತ್ರಿಗೆ ಇಎಸ್ಐ ವ್ಯವಸ್ಥೆಯಿರುವ ಕಾರಣ ಆ ಮೂಲಕ ಪಾವತಿಸಲಾಗಿದೆ ಎಂದರು.
ಪುರುಷೋತ್ತಮರಿಗೆ ಸದ್ಯ ದುಡಿಯಲು ಸಾಧ್ಯವಿಲ್ಲ. ಆದರೆ ಆಟೊರಿಕ್ಷಾವನ್ನು ಬೇರೆಯವರಿಗೆ ಬಾಡಿಗೆಗೆ ನೀಡಿದರೆ ಅದರಿಂದ ಸ್ವಲ್ಪ ಆದಾಯ ಸಿಗಲಿದೆ. ಪುರುಷೋತ್ತಮರ ಮಗಳ ಮದುವೆಗೂ ನೆರವು ನೀಡಲಾಗುವುದು ಎಂದು ಶಾಸಕ ಕಾಮತ್ ಹೇಳಿದರು.
ಈ ಸಂದರ್ಭ ಕಾರ್ಪೊರೇಟರ್ ಸಂದೀಪ್ ಗರೋಡಿ, ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್, ಬಿಜೆಪಿಯ ಮುಖಂಡರಾದ ಮನೋಜ್ ಕುಮಾರ್, ದಯಾನಂದ ಮುಗುಳ್ಯ ಉಪಸ್ಥಿತರಿದ್ದರು.