ಬೆಳ್ತಂಗಡಿ: ಸಂಕಷ್ಟಗಳ ಸರಮಾಲೆಯನ್ನು ಸಂಕಲ್ಪ ಶಕ್ತಿಯಿಂದ ಮೆಟ್ಟಿ ನಿಂತು ಕರ್ನಾಟಕ ರಾಜ್ಯವನ್ನು ಸರ್ವತೋಮುಖ ಅಭಿವೃದ್ಧಿಯತ್ತ ಮುನ್ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿಜಕ್ಕೂ ಅಭಿನಂದನಾರ್ಹರರು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಭಿಪ್ರಾಯಪಟ್ಟಿದ್ದಾರೆ.
2008 ರ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಅತಂತ್ರವಾಗಿದ್ದರೂ ಬಿಜೆಪಿ ಕೂದಲೆಳೆಯ ಅಂತರದಲ್ಲಿ ಬಹುಮತದಿಂದ ವಂಚಿತವಾಯಿತು. ಮೈತ್ರಿ ಸರಕಾರದ ಒಂದು ವರ್ಷದ ಆಡಳಿತದ ಅರಾಜಕತೆ, ವಿರೋಧಾಭ್ಯಾಸದ ನಡುವೆ ರಾಜ್ಯದ ಜನತೆ ಗೊಂದಲದಲ್ಲಿದ್ದರು. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಯಡಿಯೂರಪ್ಪರವರು ಯಡರು–ತೊಡರುಗಳ ನಡುವೆ ಯಶಸ್ವಿಯಾಗಿ ಒಂದು ವರ್ಷದ ಆಡಳಿತಾವಧಿಯನ್ನು ಪೂರೈಸಿ ಜನ ಮಾನಸದಲ್ಲಿ ತನ್ನದೇ ಛಾಪು ಮೂಡಿಸುವುದರೊಂದಿಗೆ ಆಡಳಿತದಲ್ಲಿ ಮಹತ್ವರ ಬದಲಾವಣೆ ತಂದಿರುತ್ತಾರೆ.
ರೈತ ಸಮುದಾಯದ ಭವಣೆಯನ್ನು ಸಮೀಪದಿಂದ ಕಂಡಿದ್ದ ಮುಖ್ಯಮಂತ್ರಿಗಳಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಹೆಚ್ಚುವರಿಯಾಗಿ ರೂ.4000 ಏರಿಕೆ, ಭೂ ಕಾಯ್ದೆಗೆ ಕ್ರಾಂತಿಕಾರಿ ತಿದ್ದುಪಡಿ ಮೂಲಕ ಕೃಷಿ ಭೂಮಿ ಮಾರಾಟ ನಿರ್ಬಂಧ ತೆರವು, ಎಪಿಎಂಸಿ ಕಾಯ್ದೆಗೆ ತಿದ್ದಪಡಿ ಮೂಲಕ ರೈತ ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ಸೌಲಭ್ಯ, ಉದ್ಯೋಗ ಹಾಗೂ ಉತ್ಪಾದನಾ ಸೃಷ್ಟಿಗೆ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ, ಶುದ್ಧ ಕುಡಿಯುವ ನೀರು ಪೂರೈಕೆಗೆ ಮನೆ ಮನೆಗೆ ಗಂಗಾ ಯೋಜನೆ, ಪ್ರವಾಹ ಪರಿಸ್ಥಿತಿಯ ಸಮರ್ಪಕ ನಿರ್ವಹಣೆ, ಕೋವಿಡ್ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೀಡಾದ ರೈತರು, ಚಾಲಕರು, ನೇಕಾರರು, ಶ್ರಮಿಕ ಬಂಧುಗಳು, ಕಟ್ಟಡ ಕಾರ್ಮಿಕರು, ಆಶಾ ಕಾರ್ಯಕರ್ತೆಯರಿಗೆ ವಿಶೇಷ ಧನ ಸಹಾಯ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ, ಸಮರ್ಪಕ ಪಡಿತರ ವಿತರಣೆ ಇತ್ಯಾದಿ ಹತ್ತು ಹಲವು ಜನಪರ ಯೋಜನೆಗಳು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಕೊಡುಗೆಗಳು ಅಗಿವೆ.
ಮುಖ್ಯಮಂತ್ರಿಗಳ ಧಣಿವರಿಯದ ದುಡಿಮೆಯ ಫಲಶ್ರುತಿಯು ಬೆಳ್ತಂಗಡಿಯ ಹಳ್ಳಿ – ಹಳ್ಳಿಗಳಲ್ಲೂ ಗೋಚರಿಸುತ್ತಿದ್ದು ಮೂಲ ಸೌಕರ್ಯ, ರಸ್ತೆ ಅಭಿವೃದ್ಧಿ, ಕಿಂಡಿ ಅಣೆಕಟ್ಟು, ಪ್ರವಾಸೋದ್ಯಮ, ಶಿಕ್ಷಣ, ವಸತಿ ಸೌಲಭ್ಯ ಸೇರಿದಂತೆ ಬೆಳ್ತಂಗಡಿ ಸರ್ವಾಂಗೀಣವಾಗಿ ಅಭಿವೃದ್ಧಿ ಪಥದತ್ತ ದಾಪುಗಾಲುವಿಡುತ್ತಿದೆ. ಮುಂದಿನ ದಿನಗಳಲ್ಲೂ ಮಾನ್ಯ ಮುಖ್ಯಮಂತ್ರಿಗಳಿಂದ ಇನ್ನಷ್ಟು ಕೊಡುಗೆಗಳು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಲಭ್ಯವಾಗಲಿವೆ ಎಂಬ ವಿಶ್ವಾಸದೊಂದಿಗೆ ಯಡಿಯೂರಪ್ಪರವರಿಗೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಶಕ್ತಿಯನ್ನು ತಾಲೂಕಿನ ದೈವ ದೇವರುಗಳು ಅನುಗ್ರಹಿಸಲಿ ಎಂದು ಶಾಸಕರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.