ಬೆಳ್ತಂಗಡಿ: ಇಲ್ಲಿನ ಅಂಡಿಂಜೆ ಗ್ರಾಮದ ನಡ್ತಿಕಲ್ ಮಠದ ಬಳಿ ಹಲವು ತಿಂಗಳಿಂದ ಪಾಳು ಬಿದ್ದ ಮನೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧೆ ಲೀಲಾ ಎಂಬವರಿಗೆ ಆಶ್ರಯ ಕಲ್ಪಿಸಿಕೊಡುವುದರ ಮೂಲಕ ಶಾಸಕ ಹರೀಶ್ ಪೂಂಜಾ ಅವರು ಮಾನವೀಯತೆ ಮೆರೆದಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆ ಏನೂ ತಿನ್ನದೇ ಅಂಗಳದ ಕಸದ ರಾಶಿಯಲ್ಲಿ ಬಿದ್ದಿದ್ದರು. ವೃದ್ಧೆಯನ್ನು ಅವರ ನೆರೆಮನೆ ನಿವಾಸಿ ಮರಿಯಾ ಕೊಡ್ರೆರೋ ಆರೈಕೆ ಮಾಡುತ್ತಿದ್ದರು. ಇವರು ಅಜ್ಜಿಯ ಸ್ಥಿತಿಯ ಬಗ್ಗೆ ರಾಜಶೇಖರ್ ಅಂಡಿಂಜೆ ಇವರ ಗಮನಕ್ಕೆ ತಂದಿದ್ದಾರೆ. ರಾಜಶೇಖರ್ ಅವರು ಸ್ಥಳಕ್ಕೆ ಭೇಟಿ ನೀಡಿ ಹಿಂದು ಯುವಶಕ್ತಿ ಅಲಡ್ಕ ಕ್ಷೇತ್ರ ಸಮಾಜಸೇವಾ ಸಂಘಟನೆಯ ಸದಸ್ಯರಿಗೆ ತಿಳಿಸಿದರು. ಬಳಿಕ ಸದಸ್ಯರು ಶಾಸಕರು ಮತ್ತು ಅನಾಥರ ರಕ್ಷಕರಾದ ಹೊನ್ನಯ ಕಾಟಿಪಳ್ಳ ಅವರನ್ನು ಸಂಪರ್ಕಿಸಿ, ತುರ್ತಾಗಿ ಗುಂಡೂರಿಯಲ್ಲಿ ಕಾರ್ಯಾಚರಿಸುವ ಶ್ರೀಗುರುಚೈತನ್ಯ ಸೇವಾಶ್ರಮದಲ್ಲಿ ಆಶ್ರಯ ಕಲ್ಪಿಸಿದರು ಅಲ್ಲದೇ ವೃದ್ಧೆಗೆ ಸೇವಾಶ್ರಮದಲ್ಲಿ ಅಗತ್ಯದ ಸೇವೆಗೆ ಅನುಕೂಲತೆ ಸಹಕರಿಸುವುದಾಗಿ ಭರವಸೆ ನೀಡಿದರು.
ಶ್ರೀಮತಿ ಮರಿಯಾ ಕೊಡ್ರೆರೂ, ಪೊಲೀಸ್ ದೇವರಾಜ್,ಪಂಚಾಯತ್ ಸದಸ್ಯ ನಿತಿನ್ ಎಂ. ಸ್ಟಾನಿ ಕೊಡ್ರೆರೋ,ಶೀನ ಅಚಾರಿ,ಗಣೇಶ್ ಶೆಣೈ, ದೇವದಾಸ ಸಾಲ್ಯಾನ್ ಆಲಡ್ಕ, ಮತ್ತಿತ್ತರು ಈ ವೃದ್ಧೆಯನ್ನು ಸೇವಾಶ್ರಮಕ್ಕೆ ಸಾಗಿಸುವಲ್ಲಿ ಸಹಕರಿಸಿದರು.
ಇನ್ನು ವೃದ್ಧೆಯ ಬಂಧು ಬಳಗದವರು ಇದ್ದಲ್ಲಿ ವೇಣೂರು ಪೊಲೀಸ್ ಠಾಣೆಯಲ್ಲಿ ಸಂಪರ್ಕಿಸಬೇಕಾಗಿ ಶ್ರೀಗುರುಚೈತನ್ಯ ಸೇವಾ ಪ್ರತಿಷ್ಟಾನವು ಪ್ರಕಟನೆಯಲ್ಲಿ ತಿಳಿಸಿದೆ.