ಮಂಗಳೂರು, ಜುಲೈ 7 : ವಿಲೀನದ ನಿರ್ಣಯ, ಹೆದ್ದಾರಿ ಸಚಿವರ ಭರವಸೆ, ಸತತ ಹೋರಾಟಗಳ ಹೊರತಾಗಿಯೂ ವಿವಾದಿತ ಸುರತ್ಕಲ್ ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹ ಮುಂದುವರಿಯಲು ಸ್ಥಳೀಯ ಸಂಸದ, ಶಾಸಕರುಗಳೇ ಕಾರಣ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಸುಂಕ ಸಂಗ್ರಹದ ಗುತ್ತಿಗೆದಾರರು, ಹಾಗೂ ಅಕ್ರಮ ಟೋಲ್ ಗೇಟ್ ಪರವಾಗಿದ್ದಾರೆ ಎಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಸುರತ್ಕಲ್ ನ ಖಾಸಗಿ ಹೊಟೇಲ್ ನಲ್ಲಿ ಹೋರಾಟ ಸಮಿತಿಯ ಮುಖಂಡರು ಸಭೆ ನಡೆಸಿದ್ದು ಸಂಸದರು ಮತ್ತು ಶಾಸಕರು ಅಕ್ರಮ ಟೋಲ್ ಗೇಟ್ ಮುಚ್ಚಿಸಲು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಜುಲೈ ಕೊನೆಯ ವಾರ ಸುರತ್ಕಲ್ ಟೋಲ್ ಗೇಟ್ ಗೆ ಮುತ್ತಿಗೆ ಹಾಕಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಮಾರ್ಚ್ 22 ರಂದು ನಿತಿನ್ ಗಡ್ಕರಿ ಲೋಕಸಭೆಯಲ್ಲಿಯೇ 60 ಕಿಮೀ ಒಳಗಿನ ಟೋಲ್ ಗೇಟ್ ಗಳನ್ನು ರದ್ದು ಪಡಿಸುವ ಬಗ್ಗೆ ಹೇಳಿಕೆ ನೀಡಿದ್ದರು. ಆದರೆ ಸಚಿವರ ಭರವಸೆಯ ನಂತರದ ಬೆಳವಣಿಗೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. 2018 ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೆಗೆದುಕೊಂಡ ನಿರ್ಣಯದ ಪ್ರಕಾರ ಸುರತ್ಕಲ್ ಟೋಲ್ ಗೇಟ್ ವರ್ಷಗಳ ಹಿಂದೆಯೇ ತೆರವುಗೊಳ್ಳಬೇಕಿತ್ತು. ದಿನವೊಂದಕ್ಕೆ 15 ಲಕ್ಷ ರೂಪಾಯಿಗು ಹೆಚ್ಚು ಸುಂಕ ಸಂಗ್ರಹ ಆಗುವ ಸುರತ್ಕಲ್ ಟೋಲ್ ನಲ್ಲಿ ಸುಂಕ ಸಂಗ್ರಹ ಗುತ್ತಿಗೆ ಮಾಫಿಯಾ ಆಗಿ ಬೆಳೆದಿದೆ. ಅದಲ್ಲದೆ ಇದೇ ರಸ್ತೆ ನಿರ್ವಹಣೆಗೆ ಕೋಟ್ಯಾಂತರ ರೂಪಾಯಿ ವರ್ಷವೊಂದಕ್ಕೆ ಖಾಸಗಿ ಏಜೆನ್ಸಿಗೆ ಗುತ್ತಿಗೆ ನೀಡಲಾಗುತ್ತಿದೆ. ಈ ಹತ್ತಾರು ಕೋಟಿ ರೂಪಾಯಿ ಲಾಭದ ವ್ಯವಹಾರದ ಹಿತಾಸಕ್ತಿ ಟೋಲ್ ಗೇಟ್ ತೆರವಿಗೆ ದೊಡ್ಡ ಅಡ್ಡಿಯಾಗಿದೆ. ಇಂತಹ ಹಿತಾಸಕ್ತಿಗಳ ಪರವಾಗಿ ಸಂಸದರು, ಶಾಸಕರು ನಿಂತಿದ್ದಾರೆ ಎಂದು ಹೋರಾಟ ಸಮಿತಿಯ ಸಭೆ ಗಂಭೀರ ಆರೋಪ ಮಾಡಿದೆ.

ರಸ್ತೆ ನಿರ್ವಹಣೆ ಗುತ್ತಿಗೆ ಪಡೆದ ಕಂಪೆನಿ ಮಳೆಗಾಲದ ಮುಂಚಿತವಾಗಿ ದುರಸ್ತಿ ಕೆಲಸ ನಡೆಸದಿರುವುದರಿಂದ ಹೆದ್ದಾರಿ ಪೂರ್ತಿ ಗುಂಡಿಮಯವಾಗಿ ಸಂಚಾರ ಅಪಾಯಕಾರಿಯಾಗಿ ಮಾರ್ಪಟ್ಟಿದೆ. ಕೂಳೂರು ಹೊಸ ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು ಹಳೆ ಸೇತುವೆ ಪ್ರಯಾಣಕ್ಕೆ ಅಯೋಗ್ಯ ಸ್ಥಿತಿಗೆ ತಲುಪಿದೆ. ಇಂತಹ ಕೆಟ್ಟ ರಸ್ತೆಗೆ ಬಲವಂತದಿಂದ ಟೋಲ್ ಪಾವತಿ ಮಾಡುವ ಸ್ಥಿತಿ ವಾಹನ ಸವಾರರಿಗೆ ಬಂದೊದಗಿದೆ. ಜನತೆ ಈ ಕುರಿತು ಆಕ್ರೋಶಗೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸ್ಥಳೀಯ ಶಾಸಕರುಗಳ ಕರ್ತವ್ಯ ಚ್ಯುತಿಯ ಕುರಿತು ಸಚಿವ ನಿತಿನ್ ಗಡ್ಕರಿಗೆ ವಿವರವಾದ ಪತ್ರವನ್ನು ಬರೆಯಲು ಹೋರಾಟ ಸಮಿತಿ ನಿರ್ಧರಿಸಿದೆ. ಹಾಗೂ ಟೋಲ್ ಗುತ್ತಿಗೆ ನವೀಕರಣ ಪ್ರಕ್ರಿಯೆ ಕೈಬಿಟ್ಟು ಟೋಲ್ ಗೇಟ್ ತೆರವಿಗೆ ತಕ್ಷಣ ಕ್ರಮಗಳನ್ನು ಜನಪ್ರತಿನಿಧಿಗಳು ಕೈಗೊಳ್ಳದಿದ್ದಲ್ಲಿ ಜುಲೈ ಕೊನೆಯ ವಾರ ಸುರತ್ಕಲ್ ಟೋಲ್ ಗೇಟ್ ಗೆ ಮುತ್ತಿಗೆ ಹಾಕಲಾಗುವುದು ಎಂದು ಸಮಿತಿ ಸಭೆ ತೀರ್ಮಾನಿಸಿತು.
ಸಭೆಯ ಅಧ್ಯಕ್ಷತೆಯನ್ನು ವಸಂತ ಬೆರ್ನಾಡ್ ವಹಿಸಿದ್ದರು. ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ವಿವಿಧ ಸಂಘಟನೆಗಳ ಪ್ರಮುಖರಾದ ವೈ. ರಾಘವೇಂದ್ರ ರಾವ್, ಮೂಸಬ್ಬ ಪಕ್ಷಿಕೆರೆ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ಪ್ರತಿಭಾ ಕುಳಾಯಿ, ಹರೀಶ್ ಪೇಜಾವರ, ಯೋಗೀಶ್ ಕೋಟ್ಯಾನ್ ಮುಲ್ಕಿ ರಾಜೇಶ್ ಪೂಜಾರಿ ಕುಳಾಯಿ, ಟಿ.ಎನ್ ರಮೇಶ್ ಸುರತ್ಕಲ್, ಸಲೀಂ ಶ್ಯಾಡೋ, ರಮೀಝ್ ಪಡುಬಿದ್ರೆ, ಶ್ರೀಕಾಂತ್ ಸಾಲ್ಯಾನ್, ಶ್ರೀನಾಥ್ ಕುಲಾಲ್, ರಶೀದ್ ಮುಕ್ಕ ಮತ್ತಿತರರು ಉಪಸ್ಥಿತರಿದ್ದರು.