ಮಂಗಳೂರು: ಕಾರ್ಕಳದಲ್ಲಿ ಪರಶುರಾಮ ಪ್ರತಿಮೆ ಸ್ಥಾಪನೆ ವಿಚಾರವಾಗಿ ಹಿಂದುತ್ವದ ಹೆಸರಿನಲ್ಲಿ ಕಾರ್ಕಳ ಶಾಸಕ ಶಾಸಕ ವಿ. ಸುನಿಲ್ ಕುಮಾರ್ ಮೋಸ ಮಾಡಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಿಥುನ್ ರೈ, ಗೋಮಾಳ ಜಾಗವಾಗಿರುವುದರಿಂದ ಅನುಮತಿ ನೀಡಲು ಆಗುವುದಿಲ್ಲ ಎಂದು ಕಂದಾಯ ಇಲಾಖೆ ಹೇಳಿದ್ದರೂ ಸುನಿಲ್ ಕುಮಾರ್ ತರಾತುರಿಯಲ್ಲಿ ಕಾಮಗಾರಿ ನಡೆಸಿದ್ದು, ಅನಧಿಕೃತ ಎಂದು ತಿಳಿದಿದ್ದರೂ ಅಧಿಕಾರಿಗಳಿಗೆ ಒತ್ತಡ ಹೇರಿ ಕೆಲಸ ಮಾಡಿಸಿದ್ದರು ಎಂದು ಆರೋಪ ಮಾಡಿದ್ದಾರೆ.
ನಕಲಿ ಪ್ರತಿಮೆ ಮಾಡಿರುವುದು ಹಿಂದುಗಳಿಗೆ ಮತ್ತು ಇಡೀ ದೇಶಕ್ಕೆ ಮಾಡಿರುವ ಅವಮಾನ ಎಂದು ಆಪಾದಿಸಿರುವ ರೈ, ಅಕ್ರಮ ಎಂದು ಗೊತ್ತಿದ್ದರೂ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಬಂದು ಉದ್ಘಾಟನೆ ಮಾಡಿದ್ದರು ಎಂದು ಹೇಳಿದ್ದಾರೆ.
ಅಲ್ಲದೇ, ಹಿಂದು ಸಂಘಟನೆಗಳು ಈಗ ಯಾಕೆ ಮಾತಾಡುತ್ತಿಲ್ಲ, ಪರಶುರಾಮನಿಗೆ ಅಪಮಾನ ಆಗಿಲ್ಲವೇ ಎಂದು ಪ್ರಶ್ನೆ ಮಾಡಿರುವ ಮಿಥುನ್ ರೈ, ಒಂದು ವೇಳೆ ಕಾಂಗ್ರೆಸ್ ಸರ್ಕಾರದಲ್ಲಿ ಹೀಗೆ ಆಗಿರುತ್ತಿದ್ದರೆ ಇಡೀ ಜಿಲ್ಲೆಗೆ ಬೆಂಕಿ ಹಾಕುತ್ತಿದ್ದರು ಎಂದು ಹೇಳಿದ್ದಾರೆ.
ನಕಲಿ ಪ್ರತಿಮೆ ಬಗ್ಗೆ ಪ್ರಶ್ನೆ ಮಾಡದೇ ಇದ್ದರೆ ಪರಶುರಾಮನ ಶಾಪ ತಟ್ಟಲಿದೆ ಎಂದಿರುವ ಮಿಥುನ್ ರೈ, ಬಜರಂಗದಳ ಸೇರಿ ಎಲ್ಲಾ ಹಿಂದು ಸಂಘಟನೆಗಳು ಮತ್ತು ಮಠಾಧೀಶರು ಇದರ ಬಗ್ಗೆ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ, ನಾವು ಎಲ್ಲಾ ಮಠಾಧೀಶರ ಬಳಿ ಹೋಗಿ ನಮ್ಮ ಹೋರಾಟಕ್ಕೆ ಬೆಂಬಲ ಕೋರುವುದಾಗಿಯೂ ಹೇಳಿರುವ ಮಿಥುನ್ ರೈ,
ಶಾಸಕ ಸುನಿಲ್ ಕುಮಾರ್ ವಿರುದ್ಧ ಲೋಕಾಯುಕ್ತ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.