ಉಡುಪಿ: ಕೆಲಸಕ್ಕೆ ಹೋಗುವುದಾಗಿ ತಾಯಿಗೆ ತಿಳಿಸಿ ಮನೆಯಿಂದ ತೆರಳಿದ್ದ ವ್ಯಕ್ತಿಯ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಘಟನೆ ಉಡುಪಿಯ ಬೈಂದೂರಿನಲ್ಲಿ ನಡೆದಿದೆ.
ಜೂ.6ರಂದು ಬೆಳಗ್ಗೆ ಮಂಜುನಾಥ ದೇವಾಡಿಗ (38) ಎಂಬವರು ಕೆಲಸಕ್ಕೆಂದು ಮನೆಯಿಂದ ತೆರಳಿದ್ದಾರೆ. ಕೆಲಸಕ್ಕೆ ತೆರಳಿದ ಮಂಜುನಾಥ ದೇವಾಡಿಗ ರಾತ್ರಿ 8 ಗಂಟೆಯಾದರೂ ಮನೆಗೆ ಮರಳದಿದ್ದಾಗ ಆತನ ಮೊಬೈಲ್ಗೆ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸಿರಲಿಲ್ಲ. ಮನೆಯವರೆಲ್ಲರೂ ಸೇರಿ ಅವರಿಗಾಗಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.
ನಿನ್ನೆ ಬೆಳಗ್ಗೆ 7-45 ರ ಸುಮಾರಿಗೆ ಸುಮಾರಿಗೆ ಸುರೇಶ್ ದೇವಾಡಿಗ ಎಂಬವರು ದೂರವಾಣಿ ಕರೆ ಮಾಡಿ ಕೆರ್ಗಾಲ್ ಗ್ರಾಮದ ನಾಯ್ಕನಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರ ಬದಿಯ ಖಾಲಿ ಜಾಗದಲ್ಲಿ ಮೃತದೇಹ ಇರುವುದಾಗಿ ತಿಳಿಸಿದ್ದು, ಅದರಂತೆ ಹೋಗಿ ನೋಡಿದಾಗ ಅದು ಮಂಜುನಾಥ ದೇವಾಡಿಗ ಅವರ ಮೃತದೇಹವಾಗಿತ್ತು.
ತನ್ನ ಅಳಿಯನ ಮರಣದಲ್ಲಿ ಅನುಮಾನವಿರುವುದಾಗಿ ಮೃತನ ಸೋದರ ಮಾವ ಕಂಬದಕೋಣೆ ಗ್ರಾಮದ ಪಡುವಾಯನ ಮನೆಯ ವೀರಭದ್ರ ದೇವಾಡಿಗ ಬೈಂದೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದು, ಇದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.