ಮಂಗಳೂರು: ಇಲ್ಲಿನ ಪಾವಂಜೆಯಲ್ಲಿ ಸೇತುವೆ ಮೇಲೆ ಬೈಕ್ ನಿಲ್ಲಿಸಿ ನಂದಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿದ್ದ ಮಂಡ್ಯ ಮೂಲದ ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವ ಯುವಕ ರಾಕೇಶ್ ಮೃತದೇಹ ಪತ್ತೆಯಾಗಿದೆ.
ಮಂಗಳವಾರ ತಡರಾತ್ರಿ ಪಾವಂಜೆ ನಂದಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿದ್ದ ಯುವಕ ರಾಕೇಶ್ ಮೃತದೇಹವನ್ನು , ಇಂದು ಅಗ್ನಿ ಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹೊರತೆಗೆದಿದ್ದಾರೆ.
ಮಂಗಳೂರಿನಲ್ಲಿ ಪೋಸ್ಟ್ ಆಫೀಸ್ ಉದ್ಯೋಗಿ ರಾಕೇಶ್ ಗೌಡ. ಮಂಗಳೂರಿನಿಂದ ಸ್ಕೂಟಿಯೊಂದರಲ್ಲಿ ಬಂದಿದ್ದ ರಾಕೇಶ್ ಗೌಡ ಅವರು, ಸ್ಕೂಟಿಯನ್ನು ರಾ.ಹೆ. 66ರ ಪಾವಂಜೆ ಸೇತುವೆಯ ಮೇಲೆ ಬಿಟ್ಟು ತನ್ನ ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ಸ್ಕೂಟಿಯ ಒಳಗೆ ಇಟ್ಟು ನಂದಿನಿ ನದಿಗೆ ಹಾರಿದ್ದರು ಎನ್ನಲಾಗಿದೆ.
ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನ ಸವಾರರು ಸೇತುವೆಯ ಮೇಲೆ ಸ್ಕೂಟಿ ಬಿದ್ದಿರುವುದನ್ನು ಕಂಡು ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದರು.
ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಸ್ಕೂಟಿಯನ್ನು ತಪಾಸಣೆಗೆ ಒಳಪಡಿಸಿದಾಗ ಸ್ಕೂಟಿಯಲ್ಲಿದ್ದ ಮೊಬೈಲ್ ನಿಂದ ತನ್ನ ಇಬ್ಬರು ಸ್ನೇಹಿತರಿಗೆ ಆತ್ಮ ಹತ್ಯೆ ಮಾಡಿಕೊಳ್ಳುವ ವಿಚಾರ ಮತ್ತು ಸ್ಥಳದ ಲೋಕೇಷನ್ ವಾಟ್ಸಾಪ್ ಮೂಲಕ ರವಾನಿಸಿರುವುದು ಪತ್ತೆ ಯಾಗಿದೆ.
ರಾಕೇಶ್ ಗೌಡ ಅವರು ಸಂದೇಶ ಕಳುಹಿಸಿದ್ದ ಸ್ನೇಹಿತನನ್ನು ಸ್ಥಳಕ್ಕೆ ಕರೆಸಿ ವಿಚಾರಿಸಿದ್ದು, ಪ್ರೀತಿಯ ವಿಚಾರವಾಗಿ ಆತ ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿ ಮಾಹಿತಿ ನೀಡಿದ್ದಾನೆ ಎಂದು ಮೂಲಗಳು ಮಾಹಿತಿ ನೀಡಿವೆ.