ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅನುದಾನಕ್ಕಾಗಿ ಬೋಗಸ್ ಸೃಷ್ಟಿಗೆ ಬ್ರೇಕ್ ಹಾಕಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ನಿರ್ಧರಿಸಿದೆ. ಅನುದಾನದ ಗರಿಷ್ಠ ಮೊತ್ತವನ್ನು 2.5 ಲಕ್ಷ ರೂಪಾಯಿಗೆ ಸೀಮಿತಗೊಳಿಸಲಾಗಿದೆ.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಿಂದ ನೋಂದಾಯಿತ ಸಂಘ-ಸಂಸ್ಥೆಗಳಿಗೆ ನೀಡುತ್ತಿದ್ದ ವಾರ್ಷಿಕ ಅನುದಾನ ಪಡೆಯುವಲ್ಲಿ ಕೆಲವೇ ಸಂಘ-ಸಂಸ್ಥೆಗಳು ಏಕಸ್ವಾಮ್ಯ ಸಾಧಿಸಿರುವ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಹತ್ತಾರು ವರ್ಷಗಳಿಂದ ೧೦ರಿಂದ ೧೫ ಲಕ್ಷ ರೂಪಾಯಿವರೆಗೆ ಅನುದಾನ ಪಡೆಯುತ್ತಲೇ ಬಂದ ಸಂಸ್ಥೆಗಳಿಗೆ ಈ ಬಾರಿ ನೆರವು ಕಡಿತ ಮಾಡಲಾಗಿದ್ದು, ಆನ್ ಲೈನ್ ಅರ್ಜಿಗಳಿಗೂ ಗರಿಷ್ಠ ೨.೫ ಲಕ್ಷ ರೂ. ಅನುದಾನ ಸೀಮಿತ ಮಾಡಲಾಗಿದೆ.
ಕಾರ್ಯಕ್ರಮ ನಡೆಸಿರುವ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಪರಿಶೀಲನೆ ನಡೆಸಿಯೇ ಅನುದಾನ ಅರ್ಜಿ ಸ್ವೀಕಾರ ಮಾಡಲಾಗುತ್ತಿದ್ದು, ಕೊರೋನಾ ಅವಧಿಯ ಎರಡು ವರ್ಷ ಯಾವುದೇ ಕಾರ್ಯಕ್ರಮ ಆಯೋಜಿಸದೇ ಅನುದಾನ ಪಡೆಯಲು ಕೆಲವು ಸಂಘಟನೆಗಳು ಪ್ರಯತ್ನ ನಡೆಸಿದ್ದು ಪರಿಶೀಲನೆ ಸಂದರ್ಭದಲ್ಲಿ ಬಯಲಾಗಿದೆ.
ಅನುದಾನ ಯೋಗ್ಯರಿಗೆ ಪಾರದರ್ಶಕವಾಗಿ ಹಂಚಿಕೆ ಮಾಡುವಂತೆ ಸಚಿವ ಸುನೀಲ್ ಕುಮಾರ್ ಸೂಚನೆ ನೀಡಿದ್ದು, ಅನುದಾನ ಹಂಚಿಕೆಯ ಹೊಸ ಪಟ್ಟಿ ಸದ್ಯದಲ್ಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಕಟವಾಗಲಿದೆ.