ಮಂಗಳೂರು: ನಗರದ ಎಸ್ಇಝಡ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೆಬಿಎಫ್ ಸಂಸ್ಥೆಯು ಸ್ಥಗಿತಗೊಂಡಿದೆ. ಇದೀಗ ಈ ಕಂಪೆನಿಗಾಗಿ ಭೂಮಿ ಕಳೆದುಕೊಂಡ ನಿರಾಶ್ರಿತರಿಗೆ ತಾತ್ಕಾಲಿಕವಾಗಿ ಎಂಆರ್ ಪಿಲ್ ನಲ್ಲಿ ಉದ್ಯೋಗ ಕೊಡಿಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ಆರ್.ನಿರಾಣಿ ಭರವಸೆ ನೀಡಿದ್ದಾರೆ.
ಮಂಗಳೂರಿಗೆ ಕಾರ್ಯಕ್ರಮವೊಂದರ ನಿಮಿತ್ತ ಬಂದಿದ್ದ ಸಚಿವ ಮುರುಗೇಶ್ ನಿರಾಣಿಯವರನ್ನು ಭೂಮಿ ಕಳೆದುಕೊಂಡ ಸಂತ್ರಸ್ತರು ಭೇಟಿಯಾಗಿ ಅಹವಾಲು ಸಲ್ಲಿಸಿದ್ದರು. ಎಸ್ಇಝಡ್ ಗಾಗಿ ಭೂಮಿ ಕಳೆದುಕೊಂಡವರಿಗೆ ಒಪ್ಪಂದದಂತೆ ಜೆಬಿಎಫ್ ಕಂಪೆನಿಯಲ್ಲಿ ಉದ್ಯೋಗ ಕೊಡಿಸಲಾಗಿತ್ತು. ಆದರೆ ಕಾಮಗಾರಿ ಪೂರ್ತಿಗೊಳಿಸದೆ ಈ ಕಂಪೆನಿ ಆರ್ಥಿಕ ಮುಗ್ಗಟ್ಟಿನಿಂದ ಸ್ಥಗಿತಗೊಂಡಿದೆ. ಆದರೆ ಈ ಕಂಪೆನಿಗಾಗಿ ಭೂಮಿ ಕಳೆದುಕೊಂಡು ಕೆಲಸ ಗಿಟ್ಟಿಸಿಕೊಂಡಿದ್ದ 26 ಮಂದಿಯು ಇದೀಗ ಬೀದಿಪಾಲಾಗಿದ್ದಾರೆ.
ಕೆಲಸ ಕಳೆದುಕೊಂಡಿರುವ 26 ಮಂದಿಯ ಕುಟುಂಬಿಕರು ಮುರುಗೇಶ್ ನಿರಾಣಿಯವರನ್ನು ಭೇಟಿ ಮಾಡಿ ಅಹವಾಲು ತೋಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಈ ಸಂತ್ರಸ್ತರಿಗೆ ಜೆಬಿಎಫ್ ಸಂಸ್ಥೆ ಪುನರಾರಂಭ ಆಗುವವರೆಗೆ ಎಂಆರ್ ಪಿಎಲ್ ನಲ್ಲಿ ತಾತ್ಕಾಲಿಕ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ.