ಬೆಳ್ತಂಗಡಿ; ಚಾರ್ಮಾಡಿ ಗ್ರಾ.ಪಂ ಮಾಜಿ ಸದಸ್ಯ, ಕಕ್ಕಿಂಜೆಯ ಹಿರಿಯ ಮೀನು ವ್ಯಾಪಾರಿ, ಇಲ್ಲಿನ ಜಿ.ಕೆ ಹೌಸ್ ನಿವಾಸಿ ಜಿ ಕೆ ಅಹ್ಮದ್ ಕುಂಜಿ ಹಾಜಿ (ಮೀನ್ ಮೊಣಕ)(71) ಅವರು ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಮಾ. 3 ರಂದು ನಿಧನರಾಗಿದ್ದಾರೆ.
ಕಳೆದ ಜ.16 ರಂದು ಅವರು ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳುವ ಉದ್ದೇಶದಿಂದ ಹಾಗೂ ಈ ಬಾರಿ ರಂಝಾನ್ ತಿಂಗಳನ್ನು ಮೆಕ್ಕಾ ಪುಣ್ಯ ಭೂಮಿಯಲ್ಲೇ ಕಳೆಯುವ ಇರಾದೆಯ ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಿದ್ದರು.
ರಿಯಾದ್ ನಲ್ಲಿರುವ ತನ್ನ ಪುತ್ರ ಫಾರೂಕ್ ಅವರ ಮನೆಯಲ್ಲಿ ನೆಲೆಸಿದ್ದ ಅವರು 3 ದಿನಗಳ ಹಿಂದೆ ಒಂದು ಹಂತದ ಉಮ್ರಾ ಯಾತ್ರೆ ಮುಗಿಸಿ ಮಾ.3 ರಂದೇ ಎರಡನೇ ಹಂತದ ಉಮ್ರಾ ಪರ್ಯಟನೆ ಉದ್ದೇಶಿದ್ದರು. ಈಮಧ್ಯೆ ಅವರಿಗೆ ಅನಾರೋಗ್ಯ ಕಾಣಿಸಿಕೊಂಡು ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಕಳೆದ 50 ವರ್ಷಗಳಿಂದ ಅವರು ಕಕ್ಕಿಂಜೆ ಯಲ್ಲಿ ಮೀನು ವ್ಯಾಪಾರ ನಡೆಸುತ್ತಿದ್ದರು. ಜೆಡಿಎಸ್ ಬೆಂಬಲಿತರಾಗಿ ಚಾರ್ಮಾಡಿ ಗ್ರಾ.ಪಂ ಸದಸ್ಯರೂ ಆಗಿದ್ದರು. ಎಸ್ವೈಎಸ್, ಕರ್ನಾಟಕ ಮುಸ್ಲಿಂದ ಜಮಾಅತ್ ಇದರಲ್ಲಿ ತೊಡಗಿಸಿಕೊಂಡಿದ್ದು, ಎಸ್ಸೆಸ್ಸೆಫ್ ಸಂಘಟನೆಯ ಮಹಾಪೋಷಕರಾಗಿದ್ದರು. ತನ್ನ ಮನೆಯಲ್ಲೇ ‘ವಾರ್ಷಿಕ ಬುರ್ಗಾ ಮಜ್ಲಿಸ್’ ಸಂಘಟಿಸುತ್ತಾ ಧರ್ಮಬಂಧುವಾಗಿದ್ದರು. ಹಾಗೂ ಕೊಡುಗೈ ದಾನಿಯಾಗಿಯೂ ಜನಾನುರಾಗಿಯಾಗಿದ್ದರು.
ಮೃತರ ಪತ್ನಿ ಈಗಾಗಲೇ ಮೃತರಾಗಿದ್ದು ಇದೀಗ ಅವರು ಮಕ್ಕಳಾದ ಸಿದ್ದೀಕ್, ನಝೀರ್, ರಶೀದ್, ಅಶ್ರಫ್, ಹಕೀಮ್, ಫಾರೂಕ್, ಹಂಝ (ಜಲೀಲ್), ಫಹೀದ್, ಝೀನತ್, ಆಯಿಶಾ ಮತ್ತು ಸಾಜಿದಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ಮೆಕ್ಕಾದಲ್ಲೇ ಭಾರತೀಯ ಕಾಲಮಾನ ರಾತ್ರಿ 9.00. ಕ್ಕೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.