ಮಂಗಳೂರು: ಎಂಬಿಬಿಎಸ್ ಸೀಟು ಹಂಚಿಕೆಯಲ್ಲಿ ಭಾರೀ ವಂಚನೆ ನಡೆದಿದೆ ಎಂದು ಮೆಡಿಕಲ್ ಕಾಲೇಜಿಗೆ ಮುತ್ತಿಗೆ ಹಾಕಿ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಸರ್ಕಾರದ ಅನುಮತಿ ಇಲ್ಲದೇ ಮಂಗಳೂರಿನ ಜಿ.ಆರ್. ಮೆಡಿಕಲ್ ಕಾಲೇಜು ನೂರಾರು ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟ್ ಮಾರಾಟ ಮಾಡಿದ್ದ ಕಾಲೇಜು ವಿದ್ಯಾರ್ಥಿಗಳಿಂದ ಲಕ್ಷಕ್ಕೂ ಮಿಕ್ಕಿ ಶುಲ್ಕ ವಸೂಲಿ ಮಾಡಿ ವಂಚಿಸಿದೆ ಎಂದು ಆರೋಪಿಸಲಾಗಿದೆ.
ಮಂಗಳೂರಿನ ನೀರುಮಾರ್ಗದಲ್ಲಿ ಎರಡು ವರ್ಷಗಳ ಹಿಂದೆ ಆರಂಭವಾಗಿರುವ ಗಣೇಶ್ ರಾವ್ ಮಾಲೀಕತ್ವದ ಜಿ.ಆರ್. ಮೆಡಿಕಲ್ ಕಾಲೇಜಿನಲ್ಲಿ ಲಕ್ಷಾಂತರ ರೂಪಾಯಿ ಶುಲ್ಕ ಪಾವತಿಸಿ ಪ್ರವೇಶ ಪಡೆದ 150 ವಿದ್ಯಾರ್ಥಿಗಳ ಭವಿಷ್ಯ ಈಗ ಅತಂತ್ರವಾಗಿದೆ.
2021-22ನೇ ಸಾಲಿನಲ್ಲಿ ಎಂಎ ಆರ್ ಬಿ ಮೆಡಿಕಲ್ ಕಾಲೇಜು ನಡೆಸಲು ಅನುಮತಿ ನೀಡಿತ್ತು.
ಆದರೆ 2022ರ ಸೆಪ್ಟೆಂಬರ್ ನಲ್ಲಿ ಎಂಎ ಆರ್ ಬಿ ಕಾಲೇಜಿನಲ್ಲಿ ಪರಿಶೀಲನೆ ನಡೆಸಿದ್ದಾಗ ಅಗತ್ಯ ಮಾನದಂಡ ಮತ್ತು ನುರಿತ ಸಿಬ್ಬಂದಿ ಇರಲಿಲ್ಲ ಎಂದು ಎರಡನೇ ಬ್ಯಾಚ್ ನಲ್ಲಿ ಎಂಬಿಬಿಎಸ್ ದಾಖಲಾತಿಗೆ ಅವಕಾಶ ನಿರಾಕರಿಸಲಾಗಿತ್ತು.
ಆದರೂ ಕೂಡಾ ಕಾಲೇಜು ಕಾನೂನು ಬಾಹಿರವಾಗಿ 150 ಮಂದಿಗೆ ಸೀಟು ಹಂಚಿಕೆ ಮಾಡಿದ್ದು, ಮೊದಲ ವರ್ಷದ ವಿದ್ಯಾರ್ಥಿಗಳ ಭವಿಷ್ಯ ಕೂಡಾ ಅತಂತ್ರವಾಗಿದೆ.
ಈಗಾಗಲೇ ಸೀಟು ಹಂಚಿಕೆ ಅಕ್ರಮದ ಬಗ್ಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಸಮಗ್ರ ತನಿಖೆಗೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಮೆಡಿಕಲ್ ಕಾಲೇಜು ಮುಂಭಾಗ 200ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಧರಣಿ ನಡೆದಿದ್ದು, ಸ್ಥಳಕ್ಕೆ ಮಂಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಭದ್ರತೆ ಒದಗಿಸಿದ್ದರು.