ಸುರತ್ಕಲ್ ಟೋಲ್ ಗೇಟ್ ಮುಚ್ಚುವಂತೆ ಒತ್ತಾಯಿಸಿ ಸಂಘಟನೆಗಳು ಮಾರ್ಚ್ 15 ರಂದು ಹೆಜಮಾಡಿ ಟೋಲ್ ಗೇಟ್ ನಿಂದ ಸುರತ್ಕಲ್ ಟೋಲ್ ಗೇಟ್ ವರೆಗೆ ಬೃಹತ್ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಂಡಿವೆ. ಮಾ.12ರ ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಾಜ ಸೇವಕ ಹಾಗೂ ‘ಟೋಲ್ ವಿರೋಧಿ ಹೋರಾಟ ಸಮಿತಿ’ ಸದಸ್ಯ ಅಮೃತ್ ಶೆಣೈ ಈ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೆಣೈ, ಹೆಜಮಾಡಿ ಟೋಲ್ ಗೇಟ್ ಕಾರ್ಯಾರಂಭ ಮಾಡಿದ ತಕ್ಷಣ ಮುಚ್ಚುವ ಭರವಸೆಯೊಂದಿಗೆ ತಾತ್ಕಾಲಿಕವಾಗಿ ಆರಂಭವಾದ ಸುರತ್ಕಲ್ (ಎನ್ಐಟಿಕೆ) ಟೋಲ್ ಗೇಟ್ ಕಳೆದ ಆರು ವರ್ಷಗಳಿಂದ ಮುಂದುವರಿದಿದೆ. ಒಂಬತ್ತು ಕಿ.ಮೀ ಅಂತರದ ಎರಡು ಟೋಲ್ ಗೇಟ್ ಗಳಲ್ಲಿ ಟೋಲ್ ವಸೂಲಿ ಮಾಡುವುದು ಸಾರ್ವಜನಿಕರಿಗೆ ಹೊರೆಯಾಗಿ ಪರಿಣಮಿಸಿದೆ.
“ಕಳೆದ ಐದು ವರ್ಷಗಳಲ್ಲಿ NITK ಅಥವಾ ಸುರತ್ಕಲ್ ಟೋಲ್ ಗೇಟ್ ಅನ್ನು ಮುಚ್ಚುವಂತೆ ಒತ್ತಾಯಿಸಿ ಅನೇಕ ಪ್ರತಿಭಟನೆಗಳು ನಡೆದಿವೆ. 2018ರಲ್ಲಿ ಎನ್ಎಚ್ಎಐ ಮತ್ತು ರಾಜ್ಯ ಸರ್ಕಾರ ಜಂಟಿ ಸಭೆ ನಡೆಸಿ ಸುರತ್ಕಲ್ ಮತ್ತು ಹೆಜಮಾಡಿ ಟೋಲ್ ಗೇಟ್ಗಳನ್ನು ವಿಲೀನಗೊಳಿಸಲು ನಿರ್ಣಯ ಕೈಗೊಂಡರೂ ಕೆಲವು ಕುಂಟು ನೆಪಗಳನ್ನು ಮುಂದಿಟ್ಟುಕೊಂಡು ನಿರ್ಧಾರವನ್ನು ಜಾರಿಗೆ ತರಲಿಲ್ಲ.
“ಈ ಸಮಸ್ಯೆಯ ಮಧ್ಯೆ, ಬಿ ಸಿ ರಸ್ತೆ ಮತ್ತು ಸುರತ್ಕಲ್ ಹೆದ್ದಾರಿಯನ್ನು ಟೋಲ್ ಮುಕ್ತ ಮಾಡುವ ಹಲವಾರು ಭರವಸೆಗಳನ್ನು ನೀಡಲಾಗಿದೆ. ಕಳೆದ ತಿಂಗಳು ಸಚಿವರೊಬ್ಬರು ಮಂಗಳೂರಿಗೆ ಭೇಟಿ ನೀಡಿದಾಗಲೂ ಇದೇ ಭರವಸೆಯನ್ನು ಪುನರುಚ್ಚರಿಸಿದರು. ಆದರೆ, ಪ್ರತಿದಿನ ಪ್ರಯಾಣಿಕರು ಟೋಲ್ ಪಾವತಿಸುತ್ತಿದ್ದಾರೆ.
”ಈ ಪಾದಯಾತ್ರೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿಯ 60ಕ್ಕೂ ಹೆಚ್ಚು ಸಾಮಾಜಿಕ ಸಂಘಟನೆಗಳು ಕೈಜೋಡಿಸಲಿವೆ. 5000 ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಟ್ಯಾಕ್ಸಿ ಸಂಘದ ಕಾರ್ಯದರ್ಶಿ ರಮೇಶ್ ಕೋಟ್ಯಾನ್, ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಅಬ್ದುಲ್ ಅಜೀಜ್ ಉಪಸ್ಥಿತರಿದ್ದರು.