ಉಪ್ಪಿನಂಗಡಿ; ಕೆಲಸಕ್ಕೆಂದು ಮಂಗಳೂರಿಗೆ ತೆರಳಿದ ಮಹಿಳೆ ಎರಡು ತಿಂಗಳಿಂದ ನಾಪತ್ತೆಯಾಗಿರುವ ಘಟನೆ ನೆಲ್ಯಾಡಿ ಗ್ರಾಮದ ಕೂವೆಕೊಪ್ಪ ಎಂಬಲ್ಲಿ ನಡೆದಿದೆ. ಕೂವೆಕೊಪ್ಪ ನಿವಾಸಿ ನಾಗೇಶ್ ಅವರ ಪತ್ನಿ , ಮೂವರು ಮಕ್ಕಳ ತಾಯಿ ಭಾರತಿ (35) ನಾಪತ್ತೆಯಾದ ಮಹಿಳೆ.ಈ ಬಗ್ಗೆ ಭಾರತಿ ಅವರ ಪತಿ ನಾಗೇಶ್ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಭಾರತಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಮನೆ ರಿಪೇರಿಗೆಂದು 85 ಸಾವಿರ ರೂ. ಸಾಲವನ್ನು ಪಡೆದಿದ್ದರು. ಬಳಿಕ ಜು.7ರಂದು ಪತಿ ನಾಗೇಶ್ ಅವರು ಕೂಲಿ ಕೆಲಸಕ್ಕೆಂದು ಹೋದ ಬಳಿಕ ಈಕೆ ಮಂಗಳೂರಿಗೆ ಕೂಲಿ ಕೆಲಸಕ್ಕೆಂದು ತೆರಳಿದ್ದರು. ಆಕೆ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿರಬಹುದೆಂದು ನಾಗೇಶ್ ಭಾವಿಸಿದ್ದರು. ಆದರೆ ಆ ಬಳಿಕ ಆಕೆ ನನಗೆ ಫೋನ್ ಮಾಡುವುದಾಗಲೀ ಅಥವಾ ಬೇರೆ ಯಾರಲ್ಲಿಯೂ ಫೋನ್ ಮಾಡಿ ಮಾತನಾಡುವುದಾಗಲೀ ಮಾಡಿಲ್ಲ ಎಂದು ನಾಗೇಶ್ ದೂರಿನಲ್ಲಿ ತಿಳಿಸಿದ್ದಾರೆ.
ಆಕೆ ಸಾಲ ಕಟ್ಟಲು ಸಂಘಕ್ಕೆ ಬರುತ್ತಾಳೆಂದು ಭಾವಿಸಿ ನಾನು ಸುಮ್ಮನಿದ್ದೆ. ಆದರೆ ಆಕೆ ಅಲ್ಲಿಗೂ ಬಂದಿಲ್ಲ. ಈಗ ಅವಳ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಆಕೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ ಎಂದು ಸೆ.6ರಂದು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.