ಮಂಗಳೂರು: ಕಿಡ್ನಿ ವೈಫಲ್ಯಗೊಂಡ ಬಾಲಕಿಯನ್ನು ಮಂಗಳೂರಿನಿಂದ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ನೆಲ್ಯಾಡಿ ತಲುಪುತ್ತಿದ್ದಂತೆ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಂಗಳೂರಿನ ತೊಕ್ಕೊಟ್ಟಿನ ಸೇವಂತಿಗುಡ್ಡೆ ನಿವಾಸಿಯಾಗಿರುವ ರಮೇಶ್ ನಾಯ್ಕ ಎಂಬವರ ಪುತ್ರಿ ಪ್ರಸ್ತುತ ಎಸ್ಸೆಸೆಲ್ಸಿ ಓದುತ್ತಿರುವ ತೇಜಸ್ವಿನಿಯ ಎರಡೂ ಕಿಡ್ನಿಗಳು ವೈಫಲ್ಯಗೊಂಡಿದ್ದವು.ಆಕೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆಕೆಗೆ ಬೇರೆ ಕಿಡ್ನಿ ಕಸಿ ಮಾಡಬೇಕೆಂದು ವೈದ್ಯರು ಸಲಹೆ ನೀಡಿದ ಹಿನ್ನೆಲೆ ದಾನಿಗಳ ನೀಡಿದ ನೆರವಿನಿಂದಾಗಿ ಆಕೆಯನ್ನು ಹೆತ್ತವರು ಬೆಂಗಳೂರಿಗೆ ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದರು.ಈ ವೇಳೆ ಆಂಬ್ಯುಲೆನ್ಸ್ ನೆಲ್ಯಾಡಿ ತಲುಪುತ್ತಿದ್ದಂತೆ ಆಕೆಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.ನೆಲ್ಯಾಡಿಯ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಿದರೂ ಆಕೆಗೆ ಮಧ್ಯಾಹ್ನದ ವೇಳೆ ನಿಧನಳಾಗಿದ್ದಾಳೆ ಎನ್ನಲಾಗಿದೆ.