ಮಂಗಳೂರು; ಚಿನ್ನ ಖರೀದಿಯ ನೆಪದಲ್ಲಿ ಮಹಿಳೆ ವಂಚಿಸಿರುವ ಘಟನೆ ಮಂಗಳೂರಿನ ಕಾವೂರಿನಲ್ಲಿ ನಡೆದಿದೆ. ಫರೀದಾ ವಂಚಿಸಿದ ಮಹಿಳೆ.
ಫರೀದಾ ಮಾ. 25ರಂದು ಕಾವೂರಿನಲ್ಲಿರುವ ಚಿನ್ನದ ಅಂಗಡಿಯ ಮಾಲೀಕರಿಗೆ ಕರೆ ಮಾಡಿದ ಫರೀದಾ ತಾನು ಕುಂಜತ್ಬೈಲ್ನವಳಾಗಿದ್ದು ಮಗುವಿನ ನಾಮಕರಣಕ್ಕೆ ಚಿನ್ನದ ಒಂದು ಬ್ರಾಸ್ಲೆಟ್, ಒಂದು ಚೈನ್, ಎರಡು ಉಂಗುರ ಬೇಕಾಗಿದೆ. ವಾಟ್ಸಾಪ್ನಲ್ಲಿ ಡಿಸೈನ್ ಕಳುಹಿಸಿ. ನಾನು ಆಯ್ಕೆ ಮಾಡಿ ನಿಮಗೆ ಹಣವನ್ನು ನೆಫ್ಟ್ ಮಾಡುತ್ತೇನೆ ಎಂದಿದ್ದಳು. ಅಂಗಡಿ ಮಾಲೀಕರು ಅಂತೆಯೇ ಮಾಡಿದ್ದರು. ಆಗ ಫರೀದಾ “ಒಂದು ಚೈನ್, ಒಂದು ಬ್ರಾಸ್ಲೆಟ್ ಮತ್ತು ಎರಡು ಉಂಗುರಗಳನ್ನು ಆಯ್ಕೆ ಮಾಡಿ ಮರುದಿನ ಕರೆ ಮಾಡಿ ಹಣವನ್ನು ನೆಫ್ಟ್ ಮೂಲಕ ಕಳುಹಿಸುತ್ತೇನೆ. ಆಯ್ಕೆ ಮಾಡಿದ ಚಿನ್ನವನ್ನು ಹಿಯಾಜ್ ಕೆ.ಎಸ್. ಎಂಬ ಹುಡುಗನಲ್ಲಿ ಕಳುಹಿಸಿಕೊಡಿ’ ಎಂದಳು.
ಅದರಂತೆಯೇ ಹಿಯಾಜ್ನನ್ನು ಅಂಗಡಿಗೆ ಕಳುಹಿಸಿ ಬ್ಯಾಂಕ್ನ 1.36 ಲ.ರೂ. ಮೊತ್ತದ ಡಿಪಾಸಿಟ್ ಪೇ ಸ್ಲಿಪ್ ಅನ್ನು ವಾಟ್ಸಾಆ್ಯಪ್ ಮೂಲಕ ಕಳುಹಿಸಿದ್ದಳು. ಆದರೆ ಹಣ ಮಾಲೀಕರ ಖಾತೆಗೆ ಜಮೆಯಾಗಿರಲಿಲ್ಲ. ಈ ಬಗ್ಗೆ ಅವರು ತಿಳಿಸಿದಾಗ ಫರೀದಾ “ಸರ್ವರ್ ಸ್ಲೋ ಇದೆ. 30 ನಿಮಿಷದಲ್ಲಿ ಜಮೆಯಾಗುತ್ತದೆ. ಹುಡುಗನಲ್ಲಿ ಚಿನ್ನವನ್ನು ಕೊಡಿ’ ಎಂದಳು. ನಂಬಿದ ಮಾಲೀಕರು ಚಿನ್ನಾಭರಣಗಳನ್ನು ಕಳುಹಿಸಿಕೊಟ್ಟಿದ್ದರು. ಅದೇ ದಿನ ಸಂಜೆ ಮಾಲೀಕರು ಫರೀದಾಗೆ ಕರೆ ಮಾಡಿ ಹಣ ಬಂದಿಲ್ಲ ಎಂದರು. ಆಗಲೂ ಸರ್ವರ್ ಸಮಸ್ಯೆ ಇರಬಹುದು. ನಾಳೆ ಅಂಗಡಿಗೆ ಬಂದು ಹಣವನ್ನು ನೀಡುತ್ತೇನೆ ಎಂದು ಉತ್ತರಿಸಿದ್ದಳು. ಮರುದಿನ ಹಣ ಕೇಳಿದಾಗ ನಿಮಗೇನು ಅವಸರ, ಕೊಡುತ್ತೇನೆ ಎಂದು ಬೆದರಿಸಿದ್ದಳು. ಮಾಲೀಕರು ಬರಬೇಕಾದ ಹಣವನ್ನು ಪದೇ ಪದೆ ಕೇಳಿದಾಗ ಫರೀದಾ ಕೊಡಬೇಕಾದ 1.36 ಲಕ್ಷ ರೂ. ಹಣವನ್ನು ನೀಡದೆ ಬೆದರಿಕೆ ಹಾಕಿದಳು. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲವು ಪ್ರಕರಣಗಳಲ್ಲಿ ಫರೀದಾ ಇದೇ ರೀತಿ ವಂಚಿಸಿರುವ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.