ಮಂಗಳೂರು: ರೌಡಿಶೀಟರ್ ಟ್ಯಾಬ್ಲೆಟ್ ಕೊಲೆ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿ ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಆದೇಶ ನೀಡಿದ್ದಾರೆ. ಅಲ್ಲದೇ ಆರೋಪಿಗಳಿಗೆ ಆಶ್ರಯ ನೀಡಿರುವವರಿಗೆ ಕಮೀಷನರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹತ್ಯೆ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವ ಆರು ಮಂದಿ ಆರೋಪಿಗಳನ್ನು ಈಗಾಗಲೇ ಪೊಲೀಸರು ಗುರುತಿಸಿದ್ದಾರೆ. “ಆರೋಪಿಗಳು ಸತತವಾಗಿ ತಮ್ಮ ಅಡಗುದಾಣಗಳನ್ನು ಬದಲಾಯಿಸುತ್ತಿರುವುದು ಬಂಧನಕ್ಕೆ ಸವಾಲಾಗಿದೆ. ಆದರೆ ಶೀಘ್ರದಲ್ಲೇ ಅವರನ್ನು ಸೆರೆಹಿಡಿಯಲಾಗುವುದು,” ಎಂದು ಆಯುಕ್ತರು ತಿಳಿಸಿದ್ದಾರೆ. ತನಿಖೆಯ ವೇಳೆ ಹತ್ಯೆಯ ಸಂಚು ರೂಪಿಸಲು ಮತ್ತು ಆರೋಪಿಗಳು ಪರಾರಿಯಾಗಲು ನೆರವು ನೀಡಿದ ಹಲವು ಶಂಕಿತರನ್ನು ಪ್ರಸ್ತುತ ವಿಚಾರಣೆ ನಡೆಸಲಾಗುತ್ತಿದೆ.
ಆರೋಪಿಗಳಿಗೆ ಅಡಗಿಕೊಳ್ಳಲು ಆಶ್ರಯ ನೀಡುವವರ ವಿರುದ್ಧ ಆಯುಕ್ತರು ಕಠಿಣ ಎಚ್ಚರಿಕೆ ನೀಡಿದ್ದಾರೆ. “ಯಾರೇ ಆಗಲಿ ಆರೋಪಿಗಳಿಗೆ ನೆರವು ನೀಡಿದಲ್ಲಿ ಅಥವಾ ರಕ್ಷಣೆ ನೀಡಿದಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 249(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿಪಡಿಸಲಾಗುವುದು. ಈ ಹಿಂದೆ ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಜರುಗಿಸಿದಂತೆಯೇ ಈಗಲೂ ಯಾವುದೇ ಹಿಂಜರಿಕೆಯಿಲ್ಲದೆ ಕ್ರಮ ಕೈಗೊಳ್ಳಲಾಗುವುದು,” ಎಂದಿದ್ದಾರೆ.


