ಮಂಗಳೂರು: ಕದ್ರಿ ದೇವಸ್ಥಾನದಲ್ಲಿ ಅಸಭ್ಯವಾಗಿ ವರ್ತಿಸಿ ಯುವಕನೊಬ್ಬ ದಾಂಧಲೆ ನಡೆಸಿದ್ದಾನೆ.ಅಲ್ಲದೇ ಅಣ್ಣಪ್ಪ ಸ್ವಾಮಿಯ ಗುಡಿಯ ಮುಂದೆ ಹೋಗಿ ಕಾಲಿನಿಂದ ಬಾಗಿಲು ಒದ್ದು ಅಪಚಾರ ಮಾಡಿದ್ದಾನೆ.
ಇಂದು ಬೆಳಗ್ಗೆ ಬೈಕ್ ನಲ್ಲಿ ಬಂದ ಯುವಕನೊಬ್ಬ ನೇರ ಕದ್ರಿ ದೇವಸ್ಥಾನದ ಪ್ರಾಂಗಣ ಪ್ರವೇಶಿಸಿದ್ದಾನೆ. ಬಳಿಕ ದೇವಸ್ಥಾನದ ಒಳಗೆ ಪ್ರವೇಶ ಬಂದಿದ್ದಾನೆ. ಅಲ್ಲಿಂದ ಅಣ್ಣಪ್ಪ ಸ್ವಾಮಿಯ ಗುಡಿಯ ಮುಂದೆ ಹೋಗಿ ಕಾಲಿನಿಂದ ಬಾಗಿಲು ಒದ್ದು ಅಪಚಾರ ಮಾಡಿದ್ದಾನೆ. ಇಷ್ಟು ಸಾಲದು ಎಂಬಂತೆ ಅರ್ಚಕರ ಮೇಲೂ ಹಲ್ಲೆ ನಡೆಸಿ ದೈವದ ಕತ್ತಿಯನ್ನು ಕೈಗೆತ್ತಿಕೊಂಡು ಹುಚ್ಚಾಟ ನಡೆಸಿದ್ದಾನೆ ಎನ್ನಲಾಗಿದೆ.
ನಂತರ ದೇವಸ್ಥಾನದ ಮುಂಭಾಗದ ಮಂಟಪದ ಮೇಲೇರಿ ಮಂಟಪದ ಛಾವಣಿಗೂ ಹಾನಿ ಮಾಡಿದ್ದು, ಈತನ ಹುಚ್ಚಾಟದಿಂದ ಅಲ್ಲಿ ಸೇರಿದ್ದ ಅರ್ಚಕರು ಹಾಗೂ ಭಕ್ತರು ಗಾಬರಿಯಾಗಿದ್ದಾರೆ. ಕೂಡಲೇ ಆ ಯುವಕನನ್ನು ಅಲ್ಲಿದ್ದವರು ಸೇರಿ ಕಟ್ಟಿಹಾಕಿದ್ದಾರೆ. ಬಳಿಕ ಯುವಕನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆ ಯುವಕನ ಮಾಹಿತಿ ಸದ್ಯ ಲಭ್ಯವಾಗಿಲ್ಲ. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಯುವಕನ ರಂಪಾಟದಿಂದಾಗಿ ದೇವರಿಗೆ ಮುಂಜಾನೆ ನಡೆಯಬೇಕಾಗಿದ್ದ ಪೂಜೆಯು ರದ್ದಾಗಿದೆ ಎನ್ನಲಾಗಿದೆ.