ಮಂಗಳೂರು: ಯುವಕನ ಮೇಲೆ ಅಪರಿಚಿತ ತಂಡವೊಂದು ತಲವಾರು ದಾಳಿ ನಡೆಸಿರುವ ಘಟನೆ ಮಂಗಳೂರು ನಗರದ ಹೊರವಲಯದ ನಿರುಮಾರ್ಗ ಸಮೀಪದ ಬಿತ್ತುಪಾದೆ ಪಡು ಎಂಬಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಘಟನೆಯಿಂದ ಅಡ್ಯಾರುಪದವು ನಿವಾಸಿ ರಿಯಾಝ್ ಎಂಬಾತ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳು ರಿಯಾಝ್ ತನ್ನ ಕಾರಿನಲ್ಲಿ ಯುವತಿಯೊಬ್ಬಳನ್ನು ಕರೆದುಕೊಂಡು ಬಿತ್ತ್ ಪಾದೆ ಪಡು ಪರಿಸರದಲ್ಲಿ ಹೋಗುತ್ತಿದ್ದಾಗ ತಂಡವೊಂದು ಮಾರಕಾಯುಧಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರಿಯಾಝ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಯಲ್ಲಿ ಅಪರಿಚಿತ ತಂಡ ಯುವತಿಗೂ ಹಲ್ಲೆ ನಡೆಸಿದ್ದು, ಯುವತಿ ಅವರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಹಾಗೆಯೇ ಮಹಿಳೆಯ ಚಪ್ಪಲಿಗಳು ಘಟನಾ ಸ್ಥಳದಲ್ಲೇ ದೊರಕಿರುವುದು ಈ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಿದೆ. ಪರಾರಿಯಾಗಿರುವ ಮಹಿಳೆ ಮಂಗಳೂರು ನಗರದ ಖಾಸಗಿ ಆಸ್ಪತ್ರೆಯ ಸಮವಸ್ತ್ರ ಧರಿಸಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಖುದ್ದಾಗಿ ಭೇಟಿ ನೀಡಿದ್ದು, ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.