ಮಂಗಳೂರು: ಬೆಂಗಳೂರು-ಮಂಗಳೂರು ಇಂಟಿಗ್ರೇಟೆಡ್ ಗ್ರೀನ್ ಫೀಲ್ಡ್ ಹೈ ಸ್ಪೀಡ್ ಕಾರಿಡಾರ್ ನಿರ್ಮಾಣ ಯೋಜನೆಯ ಕುರಿತು ಯೂರೋಪಿಯನ್ ಬ್ಯುಸಿನೆಸ್ ಅಂಡ್ ಟೆಕ್ನಾಲಜಿ ಸಂಸ್ಥೆಯ ನಿಯೋಗ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಗುರುವಾರದಂದು ಚರ್ಚೆ ನಡೆಸಿತು.
ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್, ‘ಮಂಗಳೂರಿನಲ್ಲಿ ಈ ಹೈಸ್ಪೀಡ್ ಕಾರಿಡಾರ್ ನಿರ್ಮಾಣದಿಂದ ಮಂಗಳೂರು ಅಭಿವೃದ್ಧಿಯ ಜತೆಗೆ ಮಾರ್ಗ ಮಧ್ಯೆ ಬರುವ ಇತರ ಎಲ್ಲ ನಗರಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಮಂಗಳೂರು ಮಾತ್ರವಲ್ಲದೇ ಇತರ ನಗರಗಳ ಬಂಡಾವಳವು ಇದರಿಂದ ಹೆಚ್ಚಾಗಲಿದೆ ಎಂದು ತಿಳಿಸಿದರು.
ಈ ಯೋಜನೆಯು ಮಂಗಳೂರು ಬಂದರಿಗೂ ಸಂಪರ್ಕ ಕಲ್ಪಿಸುವುದರಿಂದ ವ್ಯಾಪಾರ- ಉದ್ಯಮಗಳ ಬೆಳವಣಿಗೆಗೂ ಅನುಕೂಲವಾಗಲಿದೆ. 6 ರಿಂದ 8 ಪಥಗಳ ಈ ಕಾರಿಡಾರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಂತದ ಮಾತುಕತೆ ನಡೆಯಿತು. ಇನ್ನು ಕಾರಿಡಾರ್ನ ಸಾಗಿ ಹೋಗುವ ನಕಾಶೆ ಸಮೇತ ಹೆಚ್ಚಿನ ಮಾಹಿತಿಯೊಂದಿಗೆ ಚರ್ಚಿಸುವ ಅಗತ್ಯ ಬಳಷ್ಟಿದ್ದು, ಈ ವಿಚಾರವಾಗಿ ಲೋಕೋಪಯೋಗಿ ಸಚಿವರು ಮತ್ತು ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸುವುದಾಗಿಯೂ ದಿನೇಶ್ ಭರವಸೆ ನೀಡಿದರು.