ಕಡಬ; ಹುಡುಗಿ ನೋಡುವ ನೆಪದಲ್ಲಿ ಮನೆಗೆ ಬಂದು ಪರಿಚಯ ಮಾಡಿಕೊಂಡು ಯುವತಿಯ ಕುಟುಂಬದವರಿಂದ ಹಣ ವಸೂಲಿ ಮಾಡಿದವನನ್ನು ಯುವತಿಯ ಸಂಬಂಧಿಕರು ಪೊಲೀಸರಿಗೆ ಒಪ್ಪಿಸಿದ ಘಟವೆ ಆಲಂಕಾರಿನಲ್ಲಿ ನಡೆದಿದೆ.
ಮೂಡಬಿದಿರೆ ಮೂಲದ ಯುವಕ ತನ್ನ ಪರಿಚಯಸ್ಥರ ಮೂಲಕ ಆಲಂಕಾರಿನ ಕುಂಡಾಜೆಯ ಮನೆಯೊಂದಕ್ಕೆ ಹುಡುಗಿ ನೋಡುವ ನೆಪದಲ್ಲಿ ಮನೆಗೆ ಬಂದಿದ್ದದೆ. ಯುವತಿ ಹುಡುಗನನ್ನು ಮದುವೆಯಾಗಲು ನಿರಾಕರಿಸಿದರೂ ಕೆಲ ದಿನಗಳ ನಂತರ ಮತ್ತೆ ಮನೆಗೆ ಬಂದು ಮೆಡಿಸಿನ್ ಮಾಡುವ ಸ್ವ ಉದ್ಯೋಗವಿದ್ದು 35 ಸಾವಿರ ಆದಾಯ ಬರಲಿದೆ ಎಂದು ನಂಬಿಸಿ ಯುವತಿಯ ನಂಬರ್ ಪಡೆದಿದ್ದ. ಕೆಲ ದಿನಗಳ ನಂತರ ಸರ್ಕಾರದ ಯೋಜನೆಯಿಂದ ಹಣ ಬಂದಿರುವುದಾಗಿ ನಂಬಿಸಿ ಅದನ್ನು ಪಡೆಯಲು 5 ಸಾವಿರ ರೂ ನೀಡುವಂತೆ ಯುವತಿ ಮನೆಯವರಿಗೆ ತಿಳಿಸಿದ್ದ ಎನ್ನಲಾಗಿದೆ. ಹೀಗೆ ಯುವತಿ ಮನೆಯವರಿಂದ ಒಟ್ಟು 11 ಸಾವಿರ ರೂ ಪಡೆದಿರುವುದಾಗಿ ತಿಳಿದು ಬಂದಿದೆ.
ಮಂಗಳವಾರದಂದು ಚೆಕ್ ಪಡೆಯಲು 3 ಸಾವಿರದೊಂದಿಗೆ ಉಪ್ಪಿನಂಗಡಿಗೆ ಬರಲು ಯುವಕ ಫೋನ್ ಮೂಲಕ ಯುವತಿಗೆ ತಿಳಿಸಿದ್ದು ಸಂಶಯಗೊಂಡು ಯುವತಿಯು ಆಲಂಕಾರಿಗೆ ಬರಲು ತಿಳಿಸಿದ್ದಳು. ಈ ನಡುವೆ ಯುವತಿಯು ತಮ್ಮ ಮನೆಮಂದಿ ಸಹಿತ ಸಂಬಂಧಿಕರಿಗೆ ಮಾಹಿತಿ ನೀಡಿ ಆಲಂಕಾರಿನಲ್ಲಿ ಸೇರುವಂತೆ ತಿಳಿಸಿದ್ದಳು. ಯುವಕ ತನ್ನ ದ್ವಿಚಕ್ರ ವಾಹನದಲ್ಲಿ ಬಂದ ವೇಳೆ ಆತನನ್ನು ತರಾಟೆಗೆ ತೆಗೆದುಕೊಂಡು ಬಳಿಕ ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಹನ ಸಹಿತ ಆತನನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ ಈತ ಕೊಲೆ ಪ್ರಕರಣವೊಂದರಲ್ಲಿ ಹಲವು ವರ್ಷ ಜೈಲು ಸೇರಿ ಬಿಡುಗಡೆಗೊಂಡಿದ್ದ . ಅಲ್ಲದೆ ಇತ್ತೀಚೆಗೆ ಜುಗಾರಿ ಅಡ್ಡೆ ದಾಳಿಯ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಎನ್ನಲಾಗಿದೆ.