ಕೇರಳ : ಸ್ಕೇಟಿಂಗ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸ್ಕೇಟಿಂಗ್ ಬೋರ್ಡ್ ನಲ್ಲಿ ಸಾಗುತ್ತಿದ್ದ ಕೇರಳದ ಯುವಕ ರಸ್ತೆ ಅಪಘಾತಕ್ಕೆ ಬಲಿಯಾದ ದುರಂತ ಘಟನೆ ಹರ್ಯಾಣದಲ್ಲಿ ನಡೆದಿದೆ.
ಕೇರಳದ ಅನಾಸ್ ಹಜಾಸ್ ಎಂಬ ಯುವಕ ಸ್ಕೇಟಿಂಗ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸ್ಕೇಟಿಂಗ್ ಮೂಲಕ ಹೊರಟಿದ್ದರು. ಆದರೆ ಹರ್ಯಾಣದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
31 ವರ್ಷದ ಅನಾಸ್ ಕಳೆದ ಮೇ 29 ರಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 3,700 ಕಿ. ಮೀ. ಯಾತ್ರೆಯನ್ನು ಸ್ಕೇಟಿಂಗ್ ಮೂಲಕ ಸಾಗಲು ನಿರ್ಧರಿಸಿದ್ದರು ಅದರಂತೆ ಮೇ 29 ರಂದು ಕನ್ಯಾಕುಮಾರಿಯಿಂದ ಹೋರಾಟ ಯಾತ್ರೆ ಸುಗಮವಾಗಿ ಸಾಗುತ್ತಿತ್ತು. ತನ್ನ ಪಯಣದ ವಿಡಿಯೋಗಳನ್ನು ಅನಾಸ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದರು. ಆದರೆ ಅನಾಸ್ ಯಾವ ಉದ್ದೇಶಕ್ಕೆ ಹೊರಟಿದ್ದಾರೋ ಆ ಕೆಲಸ ಮಾತ್ರ ಪೂರ್ಣಗೊಳ್ಳಲಿಲ್ಲ. ಇನ್ನೇನು ಕಾಶ್ಮೀರಕ್ಕೆ ೬೦೦ ಕಿ. ಮೀ ಮಾತ್ರ ಬಾಕಿ ಇರುವಾಗಲೇ ಯಮನ ರೂಪದಲ್ಲಿ ಬಂದ ಟ್ರಕ್ ಅನಾಸ್ ಗೆ ಢಿಕ್ಕಿ ಹೊಡೆದಿದೆ.
ಗಂಭೀರ ಗಾಯಗೊಂಡ ಅವರನ್ನು ಆ ಕೂಡಲೇ ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಪ್ರಯೋಜನವಾಗಿಲ್ಲ. ಅನಾಸ್ ಅಷ್ಟರಲ್ಲಿ ಸಾವನ್ನಪ್ಪಿದ್ದಾರೆ.