ಕಾರ್ಕಳ : ಕಾಡುಪ್ರಾಣಿಗಳನ್ನು ಬೇಟೆಯಾಡಲು ಯತ್ನಿಸುತ್ತಿದ್ದಾತನನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮುಳ್ಳೂರು ಅರಣ್ಯ ಚೆಕ್ ಪೋಸ್ಟ್ ಬಳಿ ನಡೆದಿದೆ.ಕಾಟಿಪಳ್ಳ ನಿವಾಸಿ ಪಾಸ್ವಿಮ್ ಅಲಿ (35) ಬಂಧಿತ ಆರೋಪಿ.
ಅರಣ್ಯಾಧಿಕಾರಿಗಳು ಗುಂಪಿನ ಮೇಲೆ ದಾಳಿ ನಡೆಸಿದಾಗ ಸುಮಾರು ಐದರಿಂದ ಆರು ಮಂದಿ ರೈಫಲ್ನೊಂದಿಗೆ ಶಸ್ತ್ರಸಜ್ಜಿತರಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಕಾರಿನಲ್ಲಿ ಕಾಯುತ್ತಿದ್ದರು. ಕಾಟಿಪಳ್ಳ ನಿವಾಸಿ ಪಾಸ್ವಿಮ್ ಅಲಿ ಎಂಬಾತನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದು, ಇತರರು ಕಾರು ಮತ್ತು ಗನ್ ನೊಂದಿಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಶಂಕರನಾರಾಯಣ ಅರಣ್ಯ ಪ್ರದೇಶದಲ್ಲಿ ಎರಡು ಕಾಡೆಮ್ಮೆಗಳನ್ನು ಬೇಟೆಯಾಡಿದ ಆರೋಪ ಪಾಸ್ವಿಮ್ ಅಲಿ ಮೇಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅವರ ವಿರುದ್ಧ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಯತ್ನಿಸಿದ ಆರೋಪ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.