ಬೆಳ್ತಂಗಡಿ : ಅಂಗಡಿಯ ಬದಿಯಲ್ಲಿ ಜಾಹೀರಾತು ಇರಿಸಿದ್ದ ಬ್ಯಾನರ್ ಗೆ ಬೆಂಕಿ ಹಚ್ಚಿ ಕಿಡಿಗೇಡಿ ಪರಾರಿಯಾದ ಘಟನೆ ಜುಲೈ 10 ರಂದು ಬೆಳಗ್ಗಿನ ಜಾವ ನಡೆದಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಜುಲೈ 10 ರಂದು ಪ್ರಕರಣ ದಾಖಲಾಗಿದ್ದು.ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿರುವ ಸದಕತುಲ್ಲಾ ಎಂಬವರಿಗೆ ಸೇರಿದ ಜಿ.ಕೆ.ಸ್ಟೋರ್ ಹೆಸರಿನ ಅಂಗಡಿ ಬದಿಯಲ್ಲಿ ಇರಿಸಲಾಗಿದ್ದ ಜಾಹೀರಾತು ಬ್ಯಾನರ್ ಗೆ ಜುಲೈ 10 ರಂದು ಬೆಳಗ್ಗಿನ ಜಾವ ಸುಮಾರು 5 ಗಂಟೆ ಸಮಯದಲ್ಲಿ ಕಿಡಿಗೇಡಿಯೋರ್ವ ಬೆಂಕಿ ಹಚ್ಚಿದ್ದ ಓಡಿಹೋಗಿದ್ದ. ಈ ಬಗ್ಗೆ ಮಾಲೀಕ ಬೆಳಗ್ಗೆ ಅಂಗಡಿಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಸಿಸಿಕ್ಯಾಮರ ಪರಿಶೀಲನೆ ನಡೆಸಿದಾಗ ಕೃತ್ಯದ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಅಂಗಡಿ ಮಾಲೀಕ ಸದಕತುಲ್ಲಾ ಎಂಬವರು ದೂರು ನೀಡಿದ್ದು. ಪೊಲೀಸರು ಪ್ರಕರಣ ದಾಖಲಿಸಿದ್ದರು.
ಬೆಂಕಿ ಹಚ್ಚಿದ ಕಿಡಿಗೇಡಿ ಆರೋಪಿ ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮ ಕಟ್ಟೆ ನಿವಾಸಿ ಉಮೇಶ್ ಬಂಗೇರ(29) ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಜುಲೈ 10 ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಹಿಂದೆ ಆರೋಪಿ ಹೊಟೇಲ್ ನಡೆಸುತ್ತಿದ್ದು, ಇದೇ ಅಂಗಡಿಯಿಂದ 38 ಸಾವಿರದ ದಿನಸಿಗಳನ್ನು ಖರೀದಿಸಿದ ಹಣ ಬಾಕಿ ಇತ್ತು. ಈ ಹಣವನ್ನು ಅಂಗಡಿ ಮಾಲೀಕ ಜುಲೈ 9 ರಂದು ಕೊಡುವಂತೆ ಕರೆ ಮಾಡಿ ಮನವಿ ಮಾಡಿದ್ದರು. ಈ ವಿಚಾರದಿಂದ ಕೋಪಗೊಂಡು ಬೆಂಕಿ ಹಚ್ಚಿರುವುದು ತನಿಖೆ ವೇಳೆ ಬಾಯಿಬಿಟ್ಟಿದ್ದಾನೆ. ಬೆಂಕಿ ಹಚ್ಚಿದಾಗ ಪಕ್ಕದಲ್ಲಿ ಕಾರು ನಿಲ್ಲಿಸಲಾಗಿದ್ದು ಅದಲ್ಲದೆ ಅಂಗಡಿಗೆ ಬೆಂಕಿ ತಗುಲದೆ ಯಾವುದೇ ದೊಡ್ಡ ಅನಾಹುತ ಉಂಟಾಗಿಲ್ಲ ಎಂದು ಮಾಲೀಕ ಸದಕತುಲ್ಲಾ ಹೇಳಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ , ಸಬ್ ಇನ್ಸ್ಪೆಕ್ಟರ್ ಯಲ್ಲಪ್ಪ ಹಾಗೂ ಸಿಬ್ಬಂದಿ ಮತ್ತು ಮಂಗಳೂರು ಎಫ್ಎಸ್ಎಲ್ ವಿಭಾಗದ ಸೋಕೋ ಸಿಬ್ಬಂದಿ ಅರ್ಪಿತಾ, ಕಾವ್ಯಶ್ರೀ, ಸುಮನ್ ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.