ಬೆಳ್ತಂಗಡಿ: ಕೊಯ್ಯೂರಿನ ಶಿವಗಿರಿಯಲ್ಲಿರುವ ಮಲೆಕುಡಿಯರ ಸಮುದಾಯಭವನದಲ್ಲಿ ಮಲೆ ಕುಡಿಯರ ಸಂಘದ ತ್ರೈಮಾಸಿಕ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಲೆಕುಡಿಯರ ಸಂಘ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಎಳನೀರು, ಸುಲ್ಕೇರಿ ಗ್ರಾಮದಲ್ಲಿ ಗಿರಿಜನರ ಪುನರ್ ವಸತಿಗಾಗಿ ಸರಕಾರವು 190 ಎಕರೆ ಜಮೀನನ್ನು ಕಾಯ್ದಿರಿಸಿದೆ. ಆದರೆ ಇಲ್ಲಿ ಮಲೆಕುಡಿಯೇತರರು ಜಮೀನನ್ನು ಅಕ್ರಮವಾಗಿ ಕಬಳಿಕೆ ಮಾಡುತ್ತಿದ್ದಾರೆ. ಇದರಿಂದ ಮಲೆಕುಡಿಯರಿಗೆ ಅನ್ಯಾಯವಾಗುತ್ತಿದೆ. ಸರಕಾರವು ಮೀಸಲಿಟ್ಟ ಭೂಮಿಯ ಗಡಿ ಗುರುತು ಮಾಡಿ, ಇಲ್ಲಿರುವ ಮಲೆಕುಡಿಯ ನಿವಾಸಿಗಳಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡಲು ಈಗಾಗಲೇ ಅಧಿಕಾರಿಗಳಲ್ಲಿ ವಿನಂತಿಸಲಾಗಿದೆ. ಈ ಸಮಸ್ಯೆಗೆ ಸೂಕ್ತ ಪರಿಹಾರ ದೊರಕದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದರು.
ಸಮಾಜ ಸಾಕಷ್ಟು ಮುಂದುವರೆದರೂ ಮಲೆಕುಡಿಯರಿಗೆ ಸಾಕಷ್ಟು ವಿಚಾರಗಳಲ್ಲಿ ಅನ್ಯಾಯವಾಗುತ್ತಿದೆ. ಅನ್ಯಾಯವನ್ನು ಸಹಿಸಿಕೊಂಡೇ ಇದ್ದರೆ ಸಮಾಜದಲ್ಲಿ ಮಾತ್ರವಲ್ಲದೆ ಜೀವನದಲ್ಲಿಯೂ ಮುಂದೆ ಬರಲು ಸಾಧ್ಯವಿಲ್ಲ ಎಂದರು. ಸಮುದಾಯದ ಒಗ್ಗಟ್ಟಿಗಾಗಿ ಮಾ. 4ರಂದು ಕೊಯ್ಯೂರಿನಲ್ಲಿ ಜಿಲ್ಲಾ ಸಮಾವೇಶ ಹಮ್ಮಿಕೊಳ್ಳಲಿದ್ದೇವೆ ಎಂದು ತಿಳಿಸಿದ್ರು.
ಸಮಾರಂಭದಲ್ಲಿ ರಾಜ್ಯ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಕೆ. ಪೊಳಲಿ, ಮಲೆಕುಡಿಯರ ಸಂಘ ದ.ಕ. ಜಿಲ್ಲಾ ಸಮಿತಿ ಉಪಾಧ್ಯಕ್ಷ ಮಾಧವ ಸುಬ್ರಹ್ಮಣ್ಯ, ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಜಯೇಂದ್ರ ಎಂ. ನಿಡ್ಲೆ ಕಾರ್ಯಕ್ರಮ ನಿರ್ವಹಿಸಿ, ಸಂಘದ ವಕ್ತಾರ ಉಮಾನಾಥ್ ಧರ್ಮಸ್ಥಳ ಧನ್ಯವಾದ ಸಲ್ಲಿಸಿದರು.