ಪುಣೆ: ಗಂಡನ ಮನೆಯವರು ಒಡ್ಡಿದ ಕನ್ಯತ್ವ ಪರೀಕ್ಷೆಯಲ್ಲಿ ಸೊಸೆ ವಿಫಲವಾದಳು ಎಂಬ ಕಾರಣಕ್ಕೆ ವಿಚ್ಛೇದನ ನೀಡಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರಲ್ಲಿ ನಡೆದಿದೆ. ಪ್ರಥಮ ರಾತ್ರಿಯಂದು ನೀಡಿದ್ದ ಬಿಳಿ ಬೆಡ್ಶೀಟ್ ಮೇಲೆ ರಕ್ತದ ಕಲೆ ಇಲ್ಲ. ಸೊಸೆ ಕನ್ಯತ್ವ ಪರೀಕ್ಷೆಯಲ್ಲಿ ಸೋತಿದ್ದಾಳೆ. ಹೀಗಾಗಿ ವಿಚ್ಛೇದನದ ಜೊತೆಗೆ ಪರಿಹಾರವಾಗಿ 10 ಲಕ್ಷ ರೂಪಾಯಿಯನ್ನು ಕೊಡಬೇಕು ಎಂದು ಗಂಡನ ಮನೆಯವರು ಯುವತಿ ಮನೆಯವರನ್ನು ಹಿಂಸಿಸಿರುವ ಪ್ರಕರಣ ಬಯಲಾಗಿದೆ.
ಏನಿದು ಪ್ರಕರಣ?:
2020ರ ನವೆಂಬರ್ನಲ್ಲಿ ಕಂಬರ್ಜಾಟ್ ಸಮುದಾಯಕ್ಕೆ ಸೇರಿದ ಇಬ್ಬರು ಅಕ್ಕತಂಗಿಯರು, ಅದೇ ಸಮುದಾಯದ ಅಣ್ಣತಮ್ಮಂದಿರನ್ನು ವಿವಾಹವಾಗಿದ್ದರು. ಮೊದಲ ರಾತ್ರಿಯಂದು ಆ ಸಮುದಾಯದ ಸಂಪ್ರದಾಯದಂತೆ ಅಕ್ಕತಂಗಿಯರ ಶೀಲ ಪರೀಕ್ಷಿಸಲಾಗಿದೆ. ಈ ಪರೀಕ್ಷೆಯಲ್ಲಿ ಅಕ್ಕ ವಿಫಲಳಾಗಿದ್ದಾಳೆ. ಆದರೆ ತಂಗಿ ಉತ್ತೀರ್ಣಳಾಗಿದ್ದಾಳೆ ಎಂಬುದು ಪತಿಯ ಮನೆಯವರ ತಕರಾರು.
ಹಾಗಾಗಿ ಅಕ್ಕನ ಮೇಲೆ ಶೀಲ ಕಳೆದುಕೊಂಡ ಆರೋಪ ಹೊರಿಸಲಾಗಿದ್ದು, ಅದರ ಪರಿಣಾಮವಾಗಿ, “ಶೀಲಗೆಟ್ಟವಳ ತಂಗಿ’ ಎಂಬ ಹಣೆಪಟ್ಟಿ ಕಟ್ಟಿ ತಂಗಿಯನ್ನೂ ಮನೆಯಿಂದ ಆಚೆ ಕಳುಹಿಸಲಾಗಿದೆ.
ಇಬ್ಬರು ಸಹೋದರರಲ್ಲಿ ಓರ್ವ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಮನೆಗೆ ಮರಳಿ ಬಂದರೆ ಇಬ್ಬರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಇದೀಗ ಸಂತ್ರಸ್ತೆಯರು ತಮಗೆ ನ್ಯಾಯ ಕೊಡಿಸುವಂತೆ ಕೋರಿ ಮೂಢನಂಬಿಕೆ ನಿರ್ಮೂಲನಾ ಸಮಿತಿಗೆ ಪತ್ರ ಬರೆದಿದ್ದಾರೆ. ಇಬ್ಬರು ಯುವತಿಯರನ್ನು ಇಬ್ಬರನ್ನು ಅತಿಥಿ ಗೃಹಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರ ಕನ್ಯತ್ವವನ್ನು ಪರೀಕ್ಷಿಸಿ ಕಿರುಕುಳ ನೀಡಲಾಗಿದೆ. ವಿಫಲವಾದ ಕಾರಣ ‘ನೀವು ಆತ್ಮಹತ್ಯೆ ಮಾಡಿಕೊಳ್ಳಿ, ಇಲ್ಲದಿದ್ದರೆ ಹೋಗಿ ಎಂದು ಬೆದರಿಕೆ ಹಾಕಿದ್ದಾರೆ.
ಇಡೀ ಘಟನೆಯಿಂದ ನೊಂದ ಯುವತಿಯರ ಕುಟುಂಬ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿ ಇಬ್ಬರು ಪತಿಯರು ಹಾಗೂ ಅತ್ತೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.