ಆಂಧ್ರಪ್ರದೇಶ: ಪ್ರೀತಿಸಿದಾಕೆಗೆ ಕೈಕೊಟ್ಟು ಬೇರೊಂದು ಯುವತಿಯನ್ನು ಮದುವೆಯಾದ ಯುವಕನೊಬ್ಬನಿಗೆ ಆತನ ಫಸ್ಟ್ ನೈಟ್ ದಿನವೇ ಆತನ ಮಾಜಿ ಪ್ರೇಯಸಿ ಶಾಕ್ ಕೊಟ್ಟಿದ್ದಾಳೆ. ಇನ್ನು ಮದುವೆ ವಿಚಾರ ತಿಳಿದು ನ್ಯಾಯ ಕೇಳಲು ಪ್ರಿಯಕರನ ಮನೆಗೆ ಯುವತಿ ಆಗಮಿಸುತ್ತಿದ್ದಂತೆ ಪ್ರಿಯಕರ ತನ್ನ ಪತ್ನಿಯ ಜತೆ ಮೊದಲ ರಾತ್ರಿಯನ್ನು ಬಿಟ್ಟು ಎಸ್ಕೇಪ್ ಆಗಿದ್ದಾನೆ.
ಅಂದ್ಹಾಗೆ ಈ ಘಟನೆ ನಡೆದಿರೋದು ಆಂಧ್ರ ಪ್ರದೇಶದ ಗಂಗಾವರಂ ವಲಯದ ಕುರಪಲ್ಲೆಯಲ್ಲಿ. ಪೆದ್ದಪಂಜನಿ ವಲಯದ ಯುವತಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್ ಎಂಬಾತನೊಂದಿಗೆ ಪರಿಚಯವಾಗಿ ಅದು ಪ್ರೇಮಕ್ಕೂ ತಿರುಗಿತ್ತು. ಕಳೆದ ಆರು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು. ಪ್ರೀತಿಯ ಬಗ್ಗೆ ಇಬ್ಬರ ಮನೆಯವರಿಗೂ ತಿಳಿದಿತ್ತು. ಮದುವೆ ಮಾಡಿಕೊಳ್ಳಲು ಅನುಮತಿ ಸಹ ಕೇಳಿದ್ದರು.
ಹೀಗಿರುವಾಗ ಗಣೇಶ್ ನನಗೆ ಕೋವಿಡ್ ರೋಗ ಲಕ್ಷಣಗಳು ಇವೆ ಎಂದು ಹೇಳಿ ಮೂರು ತಿಂಗಳ ಹಿಂದೆ ಗಂಗಾವರಂ ವಲಯದ ಕುರಪಲ್ಲೆಯಲ್ಲಿರುವ ಮನೆಗೆ ಮರಳಿದ್ದ. ಬಳಿಕ ಏನು ನಡೆಯುತ್ತಿದೆ ಎಂಬ ವಿಚಾರ ಯುವತಿಗೆ ತಿಳಿದಿರಲಿಲ್ಲ. ಇದರ ನಡುವೆ ಗಣೇಶ್ ತನ್ನ ಮಾವನ ಮಗಳನ್ನು ಮದುವೆಯಾಗಲು ಮುಂದಾಗಿ, ಗುರುವಾರ ಬೆಳಗ್ಗೆ ಮದುವೆಯು ನಿಶ್ಚಯವಾಗಿತ್ತು.
ಮದುವೆ ನಡೆಯುವ ಮುನ್ನ ಈ ವಿಚಾರ ಗಣೇಶ್ ಸ್ನೇಹಿತರಿಂದ ಯುವತಿಗೆ ತಿಳಿದಿತ್ತು. ಬಳಿಕ ಹೇಗಾದರೂ ಮದುವೆ ತಡೆದು ನ್ಯಾಯ ಕೇಳಬೇಕೆಂದು ಯುವತಿ ಬೆಂಗಳೂರಿನಿಂದ ಹೊರಟ್ಟಿದ್ದಳು. ಆದರೆ, ಅಷ್ಟರಲ್ಲಾಗಲೇ ಮದುವೆ ಮುಗಿದು ಹೋಗಿತ್ತು. ಬಳಿಕ ಯುವತಿ ಗಂಗಾವರಂ ಮತ್ತು ಪೆದ್ದಪಂಜನಿಯಲ್ಲಿ ದೂರು ದಾಖಲಿಸಿದ್ದಳು.
ಬಳಿಕ ಠಾಣೆಯಲ್ಲಿ ನಿಲ್ಲದೆ ಪ್ರಿಯಕರ ಮನೆಯಲ್ಲಿ ಆತನ ಮೊದಲ ರಾತ್ರಿಗೆ ಸಿದ್ಧತೆ ನಡೆಯುತ್ತಿದೆ ಎಂಬ ವಿಚಾರ ತಿಳಿದು ಅಲ್ಲಿಗೆ ತೆರಳಿದ್ದಾಳೆ. ಮನೆಗೆ ತೆರಳುತ್ತಿದ್ದಂತೆ ಪ್ರಿಯಕರನ ಸಂಬಂಧಿ ಆಕೆಯನ್ನು ನಿಂದಿಸಲು ಶುರು ಮಾಡಿದ್ದಾರೆ. ಆದರೂ ಹೆದರದ ಯುವತಿ ಮತ್ತೆ ಪೊಲೀಸರ ಬಳಿ ಹೋಗಿ ನಡೆದಿದ್ದನ್ನು ಹೇಳಿ, ಅವರ ನೆರವಿನೊಂದಿಗೆ ಪ್ರಿಯಕರನ ಮನೆಗೆ ಬಂದಿದ್ದಾಳೆ. ಆದರೆ, ಆರೋಪಿ ಗಣೇಶ್ನನ್ನು ಪೊಲೀಸರು ಬಂಧಿಸೋದಕ್ಕೆ ಮುಂದಾದಾಗ ಗಣೇಶ್ ಮೊದಲ ರಾತ್ರಿಯನ್ನು ಬಿಟ್ಟು ಪತ್ನಿಯ ಜೊತೆ ಪರಾರಿಯಾಗಿದ್ದಾನೆ.
ಇದೀಗ ತನಗೆ ಮೋಸ ಮಾಡಿದ ಆರೋಪಿಯನ್ನು ಬಂಧಿಸುವಂತೆ ಸಂತ್ರಸ್ತೆ ಯುವತಿ ಪಟ್ಟು ಹಿಡಿದಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗಣೇಶ್ ಪತ್ತೆಗಾಗಿ ಬಲೆ ಬೀಸಿದ್ದಾರೆ.