ಬೆಳ್ತಂಗಡಿ: ಮನೆಯ ಮುಂಭಾಗ ನಿಲ್ಲಿಸಿದ್ದ ಟಾಟಾ ಕಂಪನಿಯ ಹತ್ತು ಚಕ್ರದ ಲಾರಿಯನ್ನು ಕಳವುಗೈದ ಆರೋಪಿಗಳಿಬ್ಬರನ್ನು ವೇಣೂರು ಪೊಲೀಸರು ಬಂಧಿಸಿದ್ದು, ಬಂಧಿತರನ್ನು ನ್ಯಾಯಾಲಯ ಜಾಮೀನಿನಲ್ಲಿ ಬಿಡುಗಡೆಗೊಳಿಸಿದೆ.
ಆರು ತಿಂಗಳ ಹಿಂದೆ ಮೂರುವರೆ ಲಕ್ಷಕ್ಕೆ ಬೆಳಗಾವಿಯ ಹನೀಫ್ ಎಂಬವರಿಗೆ ಪಿಲ್ಯದ ಆರೀಸ್ ಎಂಬವರು ಲಾರಿಯೊಂದನ್ನು ಮಾರಾಟ ಮಾಡಿದ್ದರು. ಆದರೆ ಲಾರಿಯನ್ನು ಖರೀದಿಸಿದ ಹನೀಫ್ ಲಾರಿಯ ಸಾಲದ ಕಂತನ್ನು ಕಟ್ಟದೆ ಮತ್ತು ನೋಂದಣಿ ಪತ್ರ ಬದಲಾಯಿಸದೇ ಇದ್ದುದರಿಂದ ಬೆಳಗಾವಿಯಿಂದ ಲಾರಿಯನ್ನು ವಾಪಾಸು ತಂದು ಸುಮಾರು ಐದು ತಿಂಗಳಿನಿಂದ ಪಿಲ್ಯ ಗ್ರಾಮದ ತನ್ನ ಮನೆಯ ಮುಂಭಾಗದ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದರು. ಯಾವಾಗಲೊಮ್ಮೆ ಲಾರಿಯನ್ನು ಸ್ಟಾಟ್ ಮಾಡಿ ಅಲ್ಲೇ ನಿಲ್ಲಿಸುತ್ತಿದ್ದರು.
ಆದರೆ ಕಳೆದ ವಾರ ಅಂದ್ರೆ ಡಿಸೆಂಬರ್ 3 ರಂದು ತನ್ನ ಮನೆಯ ಮುಂಭಾಗ ನಿಲ್ಲಿಸಿದ್ದ ಲಾರಿ ಕಳವಾಗಿತ್ತು. ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಎಂದು ತಿಳಿದು ನಾರಾವಿ, ಬಜಗೋಳಿ, ಕಾರ್ಕಳ, ಅಳದಂಗಡಿ, ಬೆಳ್ತಂಗಡಿ ಪರಿಸರದ ಸ್ಥಳಗಳಲ್ಲಿ ಹುಡುಕಿದರೂ ಲಾರಿ ಪತ್ತೆಯಾಗದ ಕಾರಣ ಮಹಮ್ಮದ್ ಆರಿಸ್ ಎಂಬವರು ವೇಣೂರು ಠಾಣೆಗೆ ದೂರನ್ನು ನೀಡಿದ್ದರು.
ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಬೆಳ್ತಂಗಡಿ ವೃತ್ತ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ ನೇತೃತ್ವದ ಪೊಲೀಸರ ತಂಡ ಲಾರಿ ಕಳವುಗೈದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ಅಸ್ಲಂ ಮತ್ತು ಅಪ್ರೋಜ್ ಎಂದು ಗುರುತಿಸಲಾಗಿದೆ. ಇದೀಗ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ.
ಇನ್ನು ಈ ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ವೃತ್ತ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ., ವೇಣೂರು ಪಿಎಸ್ಐ ಲೋಲಾಕ್ಷ , ಎಸ್ಐ ಗಿರಿಯಪ್ಪ, ವಿಜಯ, ಸಿಬ್ಬಂದಿಗಳಾದ ಹರೀಶ್, ಅಬ್ದುಲ್ ಲತೀಫ್, ಪ್ರಮೋದ, ಇಬ್ರಾಹಿಂ ಗರ್ಡಾಡಿ, ರಾಜೇಶ್, ಕೃಷ್ಣ ಪ್ರಶಾಂತ್ ಭಾಗವಹಿಸಿದ್ದರು.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ನೀಡಿ ಬಿಡುಗಡೆಗೊಳಿಸಿದೆ. ಆರೋಪಿಗಳ ಪರ ಜುಬೇದಾ ಸರಳಿಕಟ್ಟೆ ಮತ್ತು ಮುಸ್ತಫಾ ಕಡಬ ವಾದಿಸಿದ್ದರು