ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿಯ ರೆಂಜಿಲಾಡಿ ಹಾಗೂ ಬೆಳ್ತಂಗಡಿ ತಾಲ್ಲೂಕಿನ ಶಿರ್ಲಾಲು ಪರಿಸರದಲ್ಲಿ ಶನಿವಾರ ಸಂಜೆ ಕಂಡು ಬಂದಿರುವ ಮಿಡತೆಯ ಹಿಂಡು ಮರಭೂಮಿ ಲೋಕಸ್ಟ್ ಅಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ಈ ಪ್ರದೇಶದಲ್ಲಿ ಕಂಡು ಬಂದಿರುವ ಮಿಡತೆಯ ಪ್ರೌಢಾವಸ್ಥೆ ಹಂತದ ಮಾದರಿಯನ್ನು ಪರಿಶೀಲನೆಗಾಗಿ ಕೀಟ ಶಾಸ್ತ್ರಜ್ಞರಿಗೆ ಕಳುಹಿಸಲಾಗಿದೆ. ಮಿಡತೆ ಹಾವಳಿ ಕುರಿತು ರೈತರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಅದಾಗ್ಯೂ ಈಗ ಕಂಡು ಬಂದಿರುವ ಮಿಡತೆಗಳು ಬೆಳೆಗೆ ಹಾನಿ ಮಾಡಿದಲ್ಲಿ, ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಡ್ರಂ ಅಥವಾ ಪಾತ್ರೆ ಅಥವಾ ಫಲಕಗಳನ್ನು ಬಡಿಯುವ ಮೂಲಕ ಹೆಚ್ಚಿನ ಶಬ್ದವನ್ನು ಉಂಟು ಮಾಡುವುದು, ಬೇವಿನ ಮೂಲದ ಕೀಟನಾಶಕಗಳನ್ನು ಬೆಳೆಗಳಲ್ಲಿ ಸಿಂಪಡಿಸುವ ಮೂಲಕ ಕೀಟದಿಂದ ಬೆಳೆ ಹಾನಿ ಕಡಿಮೆ ಮಾಡಬಹುದು.
ಕೀಟಬಾಧಿತ ಪ್ರದೇಶದಲ್ಲಿ ಹೊಗೆ ಮತ್ತು ಬೆಂಕಿಯನ್ನು ಹಾಕಬಹುದು. ಕೀಟವು ಮರಿಹುಳುಗಳಾಗಿದ್ದಲ್ಲಿ ಕನಿಷ್ಠ 2 ಅಡಿ ಆಳ ಮತ್ತು 3 ಅಡಿ ಅಗಲದ ಗುಂಡಿಗಳನ್ನು ತೋಡಿ, ಮರಿ ಹುಳುಗಳನ್ನು ಸೆರೆ ಹಿಡಿದು ನಾಶಪಡಿಸಬಹುದು. ಮಿಡತೆ ಹಗಲಿನಲ್ಲಿ ಸಂಚರಿಸಿ, ರಾತ್ರಿ ವೇಳೆ ಮರಗಿಡಗಳ ಮೇಲೆ ಆಶ್ರಯ ಪಡೆಯುವುದರಿಂದ ಟ್ರ್ಯಾಕ್ಟರ್ ಮೌಂಟೆಡ್ ಜೆಟ್ ಸ್ಪ್ರೇಯರ್ಗಳ ಮೂಲಕ ಕೀಟನಾಶಕಗಳನ್ನು ಸಿಂಪಡಿಸಬಹುದು. ಆದರೆ, ಈ ಕೀಟನಾಶಕಗಳನ್ನು ಜಲಮೂಲಗಳ ಸಮೀಪ ಸಿಂಪಡಿಸದಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ.