ನವದೆಹಲಿ: ಮೇ 31ರವರೆಗೆ ಲಾಕ್ಡೌನ್ ವಿಸ್ತರಿಸಿ ಕೇಂದ್ರ ಗೃಹ ಸಚಿವಲಾಯ ಆದೇಶ ಹೊರಡಿಸಿದ್ದು, ಇಂದು ಮಧ್ಯರಾತ್ರಿಯಿಂದಲೇ ಹೊಸ ಲಾಕ್ಡೌನ್ ಆರಂಭವಾಗಲಿದೆ.
ಮೂರನೇ ಹಂತದ ಲಾಕ್ಡೌನ್ ಇಂದು ಅಂತ್ಯವಾಗಲಿದೆ. ಇಡೀ ದೇಶದಾದ್ಯಂತ ಎರಡು ವಾರಗಳ ಕಾಲ ಲಾಕ್ಡೌನ್ ವಿಸ್ತರಣೆಯಾಗಲಿದ್ದು, ಕೆಲವೇ ಕ್ಷಣಗಳಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಲಿದೆ. ಅನೇಕ ಸೇವೆ, ಚಟುವಟಿಕೆಗಳಿಗೆ ಅನುಮತಿ ನೀಡಿದರೂ, ಷರತ್ತುಗಳು ಅನ್ವಯವಾಗುತ್ತವೆ. ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿನೊಂದಿಗೆ ಲಾಕ್ ಡೌನ್ ಸಡಿಲ ಮಾಡಲಾಗುವುದು. ಶೀಘ್ರವೇ ಗೃಹ ಮಂತ್ರಾಲಯದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.
ಜೂನ್ 30 ರವರೆಗೆ ಪ್ರಯಾಣಿಕರ ರೈಲು ಸಂಚಾರವನ್ನು ಬಂದ್ ಮಾಡಲಾಗಿದ್ದು, ಮೇ 31ರವರೆಗೆ ವಿಮಾನ ಸಂಚಾರವನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ. ಮೂರು ರಾಜ್ಯಗಳಲ್ಲಿ ಈಗಾಗಲೇ ಮೇ 31 ರ ವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 5000ಕ್ಕೂ ಅಧಿಕ ಮಂದಿಗೆ ಕೊರೋನಾ ಸೋಂಕು ತಗುಲಿರುವುದು ಗೊತ್ತಾಗಿದೆ.
ಅತಿ ಹೆಚ್ಚು ಕೊರೋನಾ ಸೋಂಕು ಪ್ರಕರಣ ಇರುವ ದೇಶದ 30 ಜಿಲ್ಲೆಗಳನ್ನು ಕಂಪ್ಲೀಟ್ ಲಾಕ್ ಮಾಡಲಾಗುವುದು.
ಮುಂಬೈ, ಚೆನ್ನೈ, ಅಹ್ಮದಾಬಾದ್, ದೆಹಲಿ, ಇಂದೋರ್, ಪುಣೆ, ಕೊಲ್ಕತ್ತಾ, ಜೈಪುರ, ನಾಸಿಕ್, ಜೋಧಪುರ, ಆಗ್ರಾ, ಔರಂಗಾಬಾದ್, ತಿರುವಲ್ಲೂರು, ಕಡಲೂರು, ಗ್ರೇಟರ್ ಹೈದರಾಬಾದ್, ಚೆಂಗಲ್ಪಟ್ಟು, ಸೂರತ್, ಹೌರಾ, ಭೋಪಾಲ್, ಅಮೃತಸರ, ಕರ್ನೂಲ್, ಉದಯಪುರ್, ವಿಲ್ಲೂಪುರಂ, ಕೊಲ್ಲಾಪುರ, ಸೊಲ್ಲಾಪುರ ಮೊದಲಾದ 30 ಜಿಲ್ಲೆಗಳನ್ನು ರೆಡ್ ಜೋನ್ ಜಿಲ್ಲೆಗಳೆಂದು ಗುರುತಿಸಲಾಗಿದ್ದು ಅತಿ ಹೆಚ್ಚು ಪ್ರಕರಣ ಇರುವ ಹಿನ್ನೆಲೆಯಲ್ಲಿ ಕಂಪ್ಲೀಟ್ ಲಾಕ್ಡೌನ್ ಮಾಡಲಾಗುತ್ತದೆ ಎಂದು ಹೇಳಲಾಗಿದೆ.