ಸುಳ್ಯ: ಆಟದಲ್ಲಿ ಧರ್ಮವನ್ನು ಎಳೆದು ತಂದ ಕಾರಣಕ್ಕಾಗಿ ಯುವಕನೊಬ್ಬ ಆಟ ಬಿಟ್ಟು ಮೈದಾನದಿಂದಲೇ ಹೊರನಡೆಯಬೇಕಾದ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯದ ಜಯನಗರದಲ್ಲಿ ಈ ಘಟನೆ ನಡೆದಿದೆ. ಜಯನಗರದ ಕೊರಗಜ್ಜ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಹಿಂದೂ ಸಮುದಾಯದ ಸ್ನೇಹಿತರ ಜೊತೆ ಕ್ರೈಸ್ತ ಸಮುದಾಯದ ಯುವಕ ಕ್ರಿಕೆಟ್ ಆಡುತ್ತಿದ್ದರು. ಆಗ ಸ್ಥಳೀಯ ಬಿಜೆಪಿ ಮುಖಂಡ ಎಂದು ಹೇಳಲಾದ ಪ್ರವೀಣ್ ಎಂಬಾತ ಆಟವನ್ನು ತಡೆದು ಕ್ರೈಸ್ತ ಯುವಕನನ್ನು ಮೈದಾನದಿಂದ ಹೊರಗೆ ಕಳುಹಿಸುವಂತೆ ಗಲಾಟೆ ನಡೆಸಿದ್ದಾನೆ. ಚರ್ಚ್,ಮಸೀದಿಗಳ ಜಾಗದಲ್ಲಿ ಹಿಂದೂಗಳನ್ನು ಆಡೋಕೆ ಬಿಡ್ತಾರಾ? ಹಿಂದೂಗಳ ಜಾಗದಲ್ಲಿ ಕ್ರೈಸ್ತ ಯುವಕ ಆಡೋದು ಬೇಡ ಎಂದು ಗದರಿಸಿದ್ದಾನೆ ಎನ್ನಲಾಗಿದೆ.
ಶಾಸಕರಿಗೂ ಇದನ್ನು ಕೇಳಿದ್ದೇನೆ ಎಂದು ಹೇಳಿ ಗಲಾಟೆ ನಡೆಸಿದ ಪ್ರವೀಣ್ ಗೆ ಆಟದಲ್ಲಿ ಧರ್ಮವಿಲ್ಲ ಅಂತಾ ಮನವರಿಕೆ ಮಾಡಲು ಯುವಕರು ಪ್ರಯತ್ನಿಸಿದ್ದಾರೆ. ಕೊನೆಗೆ ಕ್ರೈಸ್ತ ಯುವಕನನ್ನು ಮೈದಾನದಿಂದ ಹೊರಗೆ ಕಳುಹಿಸಲಾಗಿದೆ. ಗಲಾಟೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪ್ರವೀಣ್ ವರ್ತನೆಗೆ ಆಕ್ಷೇಪ ವ್ಯಕ್ತವಾಗಿದೆ.