ಉಡುಪಿ : ಕೊರೊನಾ ಅನ್ನೋದು ಇವತ್ತಿನ ಪರಿಸ್ಥಿತಿಯಲ್ಲಿ ಯಾರಿಗೂ ಬೇಕಾದರೂ ಬರಬಹುದು. ಆದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ ನಾವು ಕೊರೊನಾವನ್ನು ಸುಲಭವಾಗಿ ಮಣಿಸಬಹುದು. ಕೊರೊನಾಗೆ ಧೈರ್ಯವೇ ಮದ್ದು ಹೊರತು ಬೇರನಲ್ಲ ಅಂತಾ ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಡುಪಿಯ ಹೋಟೆಲ್ ಮಾಲೀಕರೊಬ್ಬರು ಹೇಳಿದ್ದಾರೆ. ಈ ಬಗ್ಗೆ ವಿಡಿಯೋವೊಂದನ್ನು ಮಾಡಿ ಜನರಿಗೆ ಆತ್ಮಸ್ಥೆರ್ಯ ತುಂಬು ಕೆಲಸ ಮಾಡಿದ್ದಾರೆ.
“ನನಗೆ ಜುಲೈ 1 ನೇ ತಾರೀಕನಂದು ಕೊರೊನಾ ಇದೆ ಅಂತಾ ಗೊತ್ತಾಯ್ತು. ಕೂಡಲೇ ನಾನು ಆಸ್ಪತ್ರೆಗೆ ದಾಖಲಾದೆ. ಆದರೆ ನನಗೆ ಯಾವುದೇ ರೀತಿಯ ರೋಗ ಲಕ್ಷಣಗಳಲಿಲ್ಲ. ನಾನು ಆರಾಮಾಗಿದ್ದೇನೆ. ಹಾಗಾಗಿ ಆಸ್ಪತ್ರೆಯಲ್ಲೂ ನನಗೆ ಯಾವುದೇ ರೀತಿಯ ಮೆಡಿಸನ್ ಇಲ್ಲ. ಒಂದು ರೂಮಿನಲ್ಲಿ ನಾನೊಬ್ಬನೇ ಇರಬೇಕು ಅನ್ನೋದು ಬಿಟ್ಟರೆ ನನಗೆ ಬೇರೆ ಯಾವ ರೀತಿಯ ಬೇಜಾರಿಲ್ಲ. ಕೊರೊನಾ ಬಂತು ಅಂತಾ ಯಾರೂ ಕೂಡ ಧೈರ್ಯ ಕೆಡಬಾರದು. ಧೈರ್ಯವಾಗಿರಬೇಕು. ಕೊರೊನಾ ಯಾರಿಗೂ ಬೇಕಾದರೂ ಬರಬಹುದು. ಅದರಲ್ಲಿ ಬೇಸರಿಸಿಕೊಳ್ಳುವ ವಿಚಾರವೇನಿದೆ ? ಕೊರೊನಾ ದೊಡ್ಡ ದೊಡ್ಡ ವ್ಯಕ್ತಿಗಳನ್ನೇ ಬಿಟ್ಟಿಲ್ಲ. ಯಾರಿಗೂ ಬೇಕಾದರೂ ಎಷ್ಟೇ ಜಾಗ್ರತೆ ವಹಿಸಿದ್ರೆ ಬರುತ್ತದೆ. ನಾನು ಕೂಡ ಹೋಟೆಲ್ ನಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೆ. ಆದರೂ ನನಗೆ ಬಂದಿದೆ. ಹಾಗಂಥ ನಾನು ಧೈರ್ಯ ಕೆಡಲಿಲ್ಲ. ಈಗಲೂ ನಾನು ಕೋಟಾದವರೆಗೆ ನಡೆದೇ ಹೋಗುವಷ್ಟು ಶಕ್ತನಾಗಿದ್ದೇನೆ. ದಯವಿಟ್ಟು ಭಯಪಡಬೇಡಿ. ಹಾಗೇ ಸುಳ್ಳು ಸುದ್ದಿಗಳನ್ನು ಹರಡಬೇಡಿ” ಅಂತಾ ಅವರು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ನಿಜಕ್ಕೂ ಇವರ ಸಾಮಾಜಿಕ ಕಳಕಳಿಗೆ ಹ್ಯಾಟ್ಸಾಫ್ ಹೇಳಲೇ ಬೇಕು. ಕೊರೊನಾ ಭಯಕ್ಕಿಂತ ಹೆಚ್ಚಾಗಿ ಇವತ್ತು ಜನರನ್ನು ಕಾಡುತ್ತಿರುವ ಹೆದರಿಕೆ ಅಂದ್ರೆ ಕೊರೊನಾ ಬಂದ್ರೆ ನಮ್ಮನ್ನು ಜನ ಸಮಾಜದಲ್ಲಿ ಹೇಗೆ ನೋಡಿಯಾರು? ನಾವು ಹೇಗೆ ಬದುಕೋದು ಅಂತಾ. ಆದರೆ ಈ ವ್ಯಕ್ತಿಯ ಮಾತುಗಳನ್ನು ಕೇಳಿಸಿಕೊಂಡರೆ ಎಂತಹವರಿಗಾದ್ರೂ ಜೀವನ ಉತ್ಸಾಹ ಬರುತ್ತದೆ. ಕೊರೊನಾ ಅನ್ನೋದು ಏನೂ ಅಲ್ಲ ನಾವು ಧೈರ್ಯವಾಗಿರಬೇಕು ಅನ್ನೋದನ್ನು ಸರಳವಾಗಿ, ಮನಮುಟ್ಟುವಾಗಿ ಹೇಳಿದ್ದಾರೆ. ಕೊರೊನಾ ಬಂದಿದೆ ಅಂದ್ರೆ ಮುಖ ತೋರಿಸೋದಕ್ಕೆ ಭಯ ಪಡುವ ಮಂದಿಯ ನಡುವೆ ಇವರು ನಿಜಕ್ಕೂ ವಿಭಿನ್ನವಾಗಿ ನಿಲ್ಲುತ್ತಾರೆ. ಯೂ ಆರ್ ರಿಯಲೀ ಗ್ರೇಟ್ ಸಾರ್… ನಿಮ್ಮಂತಹ ಮನೋಭಾವ ಎಲ್ಲರಲ್ಲೂ ಬಂದ್ರೆ ನಿಜಕ್ಕೂ ಕೊರೊನಾಗೆ ಔಷಧಿಯೇ ಬೇಡ…