ಮೈಸೂರು : ನೀವು ಅದೆಷ್ಟೋ ಮಂದಿ ತಮ್ಮ ಅಂಗಾಂಗ ದಾನ ಮಾಡಿ ಇನ್ನೊಂದಷ್ಟು ಮಂದಿಗೆ ಬೆಳಕಾದ ಅನೇಕ ಸುದ್ದಿಗಳನ್ನು ಓದಿರ್ತೀರಾ. ಆದ್ರೆ ಈ ಸುದ್ದಿ ಓದಿದ್ರೆ ನಿಮ್ಮ ಕಣ್ಣುಗಳು ತೇವಗೊಳ್ಳದೇ ಇರಲಾರದು.
ಆತ ಚಂದನ್ ಮಲ್ಲಪ್ಪ ಅನ್ನೋ ಸ್ಪುರದ್ರೂಪಿ ಯುವಕ. ನೋಡಿದ್ರೆ ಯಾವ ಸಿನಿಮಾ ಹೀರೋಗಳಿಗೂ ಕಮ್ಮಿ ಇಲ್ಲ. ಒಂದು ಬಾರಿ ನೀವು ಚಂದನ್ ಮಲ್ಲಪ್ಪ ಅನ್ನೋ ಅವರ ಫೇಸ್ ಬುಕ್ ಖಾತೆಯನ್ನು ನೋಡಿದ್ರೆ ಆತ ಹೇಗಿದ್ದ ಅನ್ನೋದು ನಿಮಗೆ ಗೊತ್ತಾಗುತ್ತೆ.

ಚಂದನ್ ಮಲ್ಲಪ್ಪ. ವೃತ್ತಿಯಲ್ಲಿ ಇಂಜಿನಿಯರ್. ಮೈಸೂರಿನ ಮಧ್ಯಮ ವರ್ಗದ ಕುಟುಂಬದವ. ಬದುಕಿದ್ದಾಗ ಸ್ನೇಹಿತರಿಗಾಗಲಿ ಸಂಬಂಧಿಕರಿಗಾಗಲಿ ಕಷ್ಟ ಎಂದ ಕೂಡಲೇ ನೆರವಾಗುತ್ತಿದ್ದವ. ನೋಡಲು ಯಾವ ಹೀರೋಗೂ ಕಡಿಮೆ ಇಲ್ಲವೆನ್ನುವಷ್ಟು ಚೆನ್ನಾಗಿದ್ದವ. ಆದರೆ ಭಗವಂತನ ನಿರ್ಣಯ ಬೇರೆಯೇ ಇತ್ತೇನೋ..

ಕೆಲ ದಿನಗಳ ಹಿಂದಷ್ಟೇ ಅಪಘಾತಕ್ಕೀಡಾದ ಚಂದನ್ ನನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎರಡು ದಿನಗಳ ಕಾಲ ಕೃತಕ ಉಸಿರಾಟದ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಬ್ರೈನ್ ನಿಷ್ಕ್ರಿಯಗೊಂಡ ಕಾರಣ ವಿಚಾರವನ್ನು ಮನೆಯವರಿಗೆ ತಿಳಿಸಲಾಯಿತು.
ಚಂದನ್ ಅವರ ತಾಯಿ ನಿಜಕ್ಕೂ ಗಟ್ಟಿಗಿತ್ತಿ ಎನ್ನಲೇಬೇಕು. ಇದ್ದ ಒಬ್ಬ ಮಗನನ್ನು ಕಳೆದುಕೊಂಡರೂ ಅವನು ಇದ್ದಷ್ಟು ದಿನ ಮತ್ತೊಬ್ಬರಿಗೆ ನೆರವಾಗಿಯೇ ಬದುಕಿದ್ದ. ಈಗಲೂ ಆತನಿಂದ ಇನ್ನೊಬ್ಬರಿಗೆ ನೆರವಾಗಲೆಂದು ಆತನಿಂದ ನೀಡಬಹುದಾದ ಎಲ್ಲಾ ಅಂಗಾಂಗವನ್ನು ದಾನ ಮಾಡುವ ನಿರ್ಧಾರ ತೆಗೆದುಕೊಂಡರು. ಅದೇ ರೀತಿ ಕುಂಟುಂಬದ ನಿರ್ಣಯಕ್ಕೆ ಸಮ್ಮತಿಸಿದ ಆಸ್ಪತ್ರೆಯವರು ಚಂದನ್ ರವರ ಅಂಗಾಂಗಗಳನ್ನು ಬಳಸಿ ನಾಲ್ಕು ಜನರ ಪ್ರಾಣ ಉಳಿಸಿದ್ದಾರೆ. ಆಮೂಲಕ ಚಂದನ್ ರವರ ಅಂತಿಮಯಾತ್ರೆ ಅರ್ಥಪೂರ್ಣವಾಗುವಂತೆ ಮಾಡಿದರು.
ಈ ಬಗ್ಗೆ ಮಾಧ್ಯಮದ ಜೊತೆ ಚಂದನ್ ಕುಟುಂಬ ಮಾತನಾಡುವಾಗ ಚಂದನ್ ತಾಯಿ ಮಾತ್ರ ದುಃಖವನ್ನೆಲ್ಲಾ ಒಡಲಲ್ಲಿ ಇಟ್ಟುಕೊಂಡು ಒಂದೂ ಮಾತನಾಡದೇ ಧೃಡವಾಗಿ ಕೂತಿದ್ದು ಮನಕಲಕುವಂತಿತ್ತು. ಚಂದನ್ ರವರ ಅಕಾಲಿಕ ನಿಧನಕ್ಕೆ ಸ್ನೇಹಿತರು, ಕುಟುಂಬಸ್ಥರು ಪ್ರತಿಯೊಬ್ಬರೂ ಸಹ ಕಂಬನಿ ಮಿಡಿದಿದ್ದಾರೆ. ಆದರೆ ಸಾವಿನಲ್ಲೂ ಸಾರ್ಥಕತೆ ಮೆರೆದ ಸ್ನೇಹಿತನ ಬಗ್ಗೆ ಹೆಮ್ಮೆಯೂ ಪಟ್ಟಿದ್ದಾರೆ.
ಇನ್ನು ತಾನು ಹೋದರೂ ನಾಲ್ಕು ಜನರ ಪ್ರಾಣ ಉಳಿಸಿದ ಚಂದನ್ ರವರ ಪಾರ್ಥೀವ ಶರೀರವನ್ನು ಆಸ್ಪತ್ರೆಯಿಂದ ಕರೆದೊಯ್ಯುವ ಸಮಯದಲ್ಲಿ ಅಲ್ಲಿನ ಪ್ರತಿಯೊಬ್ಬ ಸಿಬ್ಬಂದಿಯೂ ಹಾಜರಾಗಿ ಎದ್ದು ನಿಂತು ಸಲ್ಯೂಟ್ ಮಾಡುವ ಮೂಲಕ ಗೌರವ ಅರ್ಪಿಸಿದ್ದಾರೆ. ದೊಡ್ಡ ವೈದ್ಯರಿಂದ ಹಿಡಿದು ಆಸ್ಪತ್ರೆಯ ಪ್ರತಿಯೊಬ್ಬ ಸಿಬ್ಬಂದಿಯೂ ಹಾಗೂ ಸಾರ್ವಜನಿಕರೂ ಸಹ ಸಾಲುಗಟ್ಟಿ ನಿಂತು ಗೌರವ ಅರ್ಪಿಸಿದ ದೃಶ್ಯ ನಿಜಕ್ಕೂ ಮೈಜುಮ್ಮೆನ್ನುವಂತಿತ್ತು. ಚಂದನ್ ಗೆ ಸಂಬಂಧವಿಲ್ಲದ ಅದೆಷ್ಟೋ ಜನರು ನಿಂತು ಹಾರೈಸಿದ್ದು “ಮತ್ತೊಮ್ಮೆ ಹುಟ್ಟಿ ಬಾ ಗೆಳೆಯ ಎಂದು”. ಇನ್ನು ಮಗನ ಸಾವಿನ ನೋವಿನಲ್ಲೂ ಆತನ ಹೆತ್ತವರು ಆತನಿಗೆ ಸಿಕ್ಕ ಗೌರವ ನೋಡಿ ಆತನ ಬದುಕು ಸಾರ್ಥಕವಾಯ್ತು ಎಂದುಕೊಂಡಿದ್ದು ಸುಳ್ಳಲ್ಲ.