ವಿಟ್ಲ: ಕಾಳೀಶ್ವರ ಸ್ವಾಮೀ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಜಾಗದ ವಿಚಾರದಲ್ಲಿ ತಂಡ ಕಟ್ಟಿಕೊಂಡು ತನ್ನ ಮಗಳು ಮತ್ತು ಅಳಿಯನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಕೊಳ್ನಾಡು ಗ್ರಾಮದಲ್ಲಿ ನಡೆದಿದೆ. ಕೊಳ್ನಾಡು ಗ್ರಾಮದ ಖಂಡಿಗ ಕಾಳೀಶ್ವರ ಸ್ವಾಮಿ ಯಾನೆ ಸುರೇಶ್ ಪ್ರಭು ತನ್ನ ಮಗಳು, ಅಳಿಯನ ಮೇಲೆ ಮಾರಣಾಂತಿಕ ಹಲ್ಲೆಗೈದಿದ್ದಾರೆ.
ಜಮೀನು ವಿವಾದವೇ ಕೊಲೆ ಯತ್ನಕ್ಕೆ ಕಾರಣವಾಗಿದ್ದು, ಸುರೇಶ್ ಪ್ರಭು ಯಾನೆ ಕಾಳೀಶ್ವರ ಸ್ವಾಮಿ ಮತ್ತು ಆತನ ಐದು ಜನರ ತಂಡ ಕಿರಣ ಮತ್ತು ಆಕೆಯ ಪತಿ ಸುಳ್ಯ ಅಲೆಟ್ಟಿಯ ಪಟಕ್ಕುಂಜ ನಿವಾಸಿ ಚೇತನ್ ನಾಯಕ್(38) ಮೇಲೆ ದೊಣ್ಣೆ, ಕಬ್ಬಿಣ ರಾಡ್ ಮತ್ತು ಮಾರಕಾಸ್ತ್ರಗಳಿಂದ ಕಾಳೀಮಾತೆಯ ದೇವಸ್ಥಾನ ಎದುರಿನ ರಸ್ತೆಯಲ್ಲೇ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ್ದಾರೆ.
ರಕ್ತದ ಮಡುವಿನಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಚೇತನ್ ನನ್ನು ಸ್ಥಳೀಯರು ವಿಟ್ಲ ಸಮುದಾಯ ಆಸ್ಪತ್ರೆಗೆ ಕೊಂಡೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನಾ ಸ್ಥಳಕ್ಕೆ ಹೊಯ್ಸಳ ಪೊಲೀಸರು ಆಗಮಿಸಿದ್ದಾರೆ. ಆರೋಪಿ ಕಾಳೀಶ್ವರ ಮತ್ತು ಆತನ ಸಹಚರರಿಂದ ಈ ಕೃತ್ಯ ನಡೆದಿದೆ.