ಬಂಟ್ವಾಳ: ಬಿಸಿರೋಡಿನ ಪೇಟೆಯ ಅಂಗಡಿಗಳಲ್ಲಿ 2024 ರಲ್ಲಿ ಲಕ್ಷಾಂತರ ರೂ. ಖೋಟಾ ನೋಟು ಚಲಾವಣೆಗೆ ಬಂದು ಪೊಲೀಸರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ನಿವಾಸಿಗಳಾದ ಮಹಮ್ಮದ್ ಸಿ.ಎ. ಮತ್ತು ಖಮರುನ್ನೀಶ ಪೊಲೀಸರ ಕೈಗೆ ಸಿಕ್ಕಿಕೊಂಡಿದ್ದರು. ಆದರೆ ಇನ್ನೋರ್ವ ಪ್ರಮುಖ ಆರೋಪಿಯಾಗಿದ್ದ ಕೇರಳ ಚೆಂಗಳ ನಿವಾಸಿ ಶರೀಫ್ ಪಿ.ಎ.ಅವರನ್ನು ಬಂಟ್ವಾಳ ಪೋಲೀಸರ ತಂಡ ಇದೀಗ ಬಂಧಿಸಿದೆ.
ಕೇರಳ ನಿವಾಸಿಗಳ ಈ ತಂಡವು ಬಿಸಿರೋಡಿಗೆ ಕಾರಿನಲ್ಲಿ ಬಂದು ಅಂಗಡಿಗಳಲ್ಲಿ 500 ಮುಖ ಬೆಲೆಯ ಖೋಟಾ ನೋಟುಗಳನ್ನು, 10 ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಅಂದರೆ 100 ರೂಪಾಯಿಗಿಂತ ಕಡಿಮೆ ಬೆಲೆಯ ಸಾಮಾಗ್ರಿಗಳನ್ನು ಪಡೆದು ಚಿಲ್ಲರೆ ಹಣವನ್ನು ಅಸಲಿಯಾಗಿ ಪರಿವರ್ತನೆ ಮಾಡಿ ಹೊರಟು ಹೋಗುತ್ತಿದ್ದರು. ಈ ಬಗ್ಗೆ ಅಂಗಡಿಯ ಮಾಲಕರುಗಳಿಗೆ ಸಂಶಯ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದು, ದ ನಗರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ಮತ್ತು ಎಸ್.ಐ.ರಾಮಕೃಷ್ಣ ಅವರ ತಂಡ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಆದರೆ ಪ್ರಕರಣದ ಮೂಲ ರೂವಾರಿ ಶರೀಫ್ ತಲೆಮರೆಸಿಕೊಂಡಿದ್ದು, ಇದೀಗ ಈತನನ್ನು ಕೇರಳ ವಿದ್ಯಾನಗರದಲ್ಲಿ ಖಚಿತವಾದ ಮಾಹಿತಿ ಮೇಲೆ ಬಂಧನ ಮಾಡಲಾಗಿದೆ.