ಮಂಗಳೂರು: ನಗರದ ಲೈಟ್ ಹೌಸ್ ಹಿಲ್ ರಸ್ತೆಯ ವಿವಾದ ಬಗೆಹರಿದ ಬೆನ್ನಲ್ಲೇ ಲೇಡಿಹಿಲ್ ವೃತ್ತ ವಿವಾದದ ಸುಳಿಗೆ ಸಿಲುಕಿಕೊಂಡಿದೆ. ಲೇಡಿಹಿಲ್ ವೃತ್ತಕ್ಕೆ ಹಿಂದು ಸಮಾಜದಲ್ಲಿನ ಜಾತಿ ಪದ್ಧತಿ, ಅಸ್ಪರ್ಶತೆ ವಿರುದ್ಧ ಹೋರಾಡಿದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡಬೇಕೆಂದು ನಗರದ ಬಿರುವೆರೆ ಕುಡ್ಲ ಸಂಘಟನೆ, ಬಜರಂಗದಳ, ವಿಶ್ವಹಿಂದೂ ಪರಿಷತ್ ಸೇರಿದಂತೆ ಹಲವು ಸಂಘಟನೆಗಳು ಹಲವು ಬಾರಿ ಜನಪ್ರತಿನಿಧಿಗಳ ಬಳಿ ಆಗ್ರಹಿಸಿದ್ದರು.
ಇಂದು ಜರಂಗದಳದ ಕಾರ್ಯಕರ್ತರು ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನ ನಾಮಫಲಕ ಹಾಕಿದ್ದರು. ಆದರೆ ನಾಮಫಲಕ ಹಾಕಿದ ಅರ್ಧ ಗಂಟೆಯಲ್ಲಿ ಪೊಲೀಸ್ ಇಲಾಖೆ ಫಲಕವನ್ನು ತೆರವುಗೊಳಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಕಥೊಲಿಕ್ ಸಭಾ ಮಂಗಳೂರು ಸಂಸ್ಥೆ ಪೊಲೀಸ್ ಇಲಾಖೆಗೆ ಒತ್ತಡ ಹಾಕಿ ತೆರವು ಗೊಳಿಸಿದೆ ಎಂದು ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, “ಹಿಂದೂ ಧರ್ಮದ ಮಹಾನ್ ಸಂತರ ಹೆಸರನ್ನು ಲೇಡಿಹಿಲ್ ಸರ್ಕಲ್ ನಾಮಕರಣಗೊಳಿಸಲು ವಿರೋಧಿಸುವ ಸಮಾಜ ಘಾತುಕ ಸಂಘಟನೆಗಳೇ ಇನ್ನು ಕೆಲವೇ ದಿನಗಳಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ನಾರಾಯಣ ಗುರುಗಳ ಹೆಸರನ್ನು ಲೇಡಿಹಿಲ್ ಸರ್ಕಲ್ ಗೆ ನಾಮಕರಣಗೊಳಿಸಲಿದ್ದೇವೆ ತಡೆಯುವಿರಾ?” ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.