ಮಂಗಳೂರು: ನಿರ್ಮಾಣ ಹಂತದಲ್ಲಿರುವ ಬಹು ಮಹಡಿ ಕಟ್ಟಡದಿಂದ ಕಾರ್ಮಿಕ ಯುವಕನೊಬ್ಬ ಆಯ ತಪ್ಪಿ ಕೆಳಗೆ ಬಿದ್ದ ಘಟನೆ ನಗರದ ಪಡೀಲ್ ಬಳಿ ನಡೆದಿದೆ. ಮೃತರನ್ನು ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಪುಣ್ಕೆದಡಿ ನಿವಾಸಿ ವಿಜಯ್ (22) ಎಂದು ಗುರುತಿಸಲಾಗಿದೆ.
ವಿಜಯ್ ಹಾಗೂ ಇಬ್ಬರು ನಿರ್ಮಾಣ ಹಂತದಲ್ಲಿರುವ ಕಟ್ಟಡದ 4ನೇ ಮಹಡಿಯಲ್ಲಿ ಫ್ಯಾಬ್ರಿಕೇಶನ್ ಕೆಲಸ ಮಾಡುತ್ತಿದ್ದರು. ವಿಜಯ್ ಆಕಸ್ಮಿಕವಾಗಿ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ತಲೆ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಅವರು ಕೊನೆಯುಸಿರೆಳೆದಿದ್ದರು. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿನಾಲ್ಕೂರು ಗ್ರಾಮದ ಪುಣ್ಕೆದಡಿ ನಿವಾಸಿ ಗುರುವ ಎಂಬವರ ಇಬ್ಬರು ಮಕ್ಕಳಲ್ಲಿ ವಿಜಯ್ ಕಿರಿಯವನು. ಅಕ್ಕ ಅವಿವಾಹಿತಳಾಗಿದ್ದು, ಮನೆಯಲ್ಲಿದ್ದಾರೆ. ತಂದೆ, ತಾಯಿ ಇಬ್ಬರೂ ಅನಾರೋಗ್ಯದಿಂದಿದ್ದು ವಿಜಯ್ನ ದುಡಿಮೆಯೇ ಕುಟುಂಬಕ್ಕೆ ಆಧಾರವಾಗಿತ್ತು. ಕಳೆದ ಬಾರಿಯಷ್ಟೆ ಬಂಟ್ವಾಳ ಸರಕಾರಿ ಕಾಲೇಜಿನಲ್ಲಿ ಪದವಿ ಮುಗಿಸಿದ್ದ ವಿಜಯ್ ಕಟ್ಟಡಗಳಲ್ಲಿ ಪೈಂಟಿಂಗ್ ಕೆಲಸಕ್ಕೆ ಸೇರಿದ್ದ. ಅವರ ಮನೆ ತೀರಾ ಶಿಥಿಲಗೊಂಡಿದ್ದು, ದುರಸ್ತಿ ನಡೆಸಲು ಸಿದ್ಧತೆ ನಡೆಸಿದ್ದ ಎಂದು ತಿಳಿದು ಬಂದಿದೆ. ಇದಲ್ಲದೆ ವಿಹಿಂಪ, ಬಜರಂಗದಳದ ಸಕ್ರಿಯ ಸದಸ್ಯರಾಗಿದ್ದರು.