Wednesday, June 24, 2026
Homeಕರಾವಳಿಉಡುಪಿಕುಂದಾಪುರದಲ್ಲಿ ಫಿನಾನ್ಶಿಯರ್ ಬರ್ಬರ ಹತ್ಯೆ ಪ್ರಕರಣ : ಕೆಲವೇ ಗಂಟೆಗಳಲ್ಲಿ ಕೊಲೆಗಾರನನ್ನು ಬಂಧಿಸಿದ ಪೊಲೀಸರು

ಕುಂದಾಪುರದಲ್ಲಿ ಫಿನಾನ್ಶಿಯರ್ ಬರ್ಬರ ಹತ್ಯೆ ಪ್ರಕರಣ : ಕೆಲವೇ ಗಂಟೆಗಳಲ್ಲಿ ಕೊಲೆಗಾರನನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಕುಂದಾಪುರ: ಕೋಟೇಶ್ವರ ಸಮೀಪದ ಕಾಳಾವರ ದಲ್ಲಿ ನಡೆದ ಫಿನಾನ್ಶಿಯರ್ ಕೊಲೆ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಲೆಯಾದ ಅಜೇಂದ್ರ ಶೆಟ್ಟಿ (33) ಅವರನ್ನು ಅವರ ಪಾಲುದಾರ ಮೊಳಹಳ್ಳಿ ನಿವಾಸಿ ಅನೂಪ್ ಶೆಟ್ಟಿ ಕೊಲೆ ಮಾಡಿರೋದು ಬಯಲಾಗಿದೆ. ಇವರಿಬ್ಬರು ಪಾಲುದಾರಿಕೆಯಲ್ಲಿ ಕಾಳಾವರ ನಂದಿಕೇಶ್ವರ ಕಾಂಪ್ಲೆಕ್ಸ್‌ನಲ್ಲಿ 2017ರಿಂದ ಫೈನಾನ್ಸ್ ವ್ಯವಹಾರ ನಡೆಸಿಕೊಂಡಿದ್ದರು. ಅಂಜೇಂದ್ರ ಶೆಟ್ಟಿ ಜು.30ರಂದು ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಹಾಗೂ ಆತನ ಸ್ನೇಹಿತರು ಹುಡುಕಾಟ ನಡೆಸಿದರು. ರಾತ್ರಿ 11:15ರ ಸುಮಾರಿಗೆ ಫೈನಾನ್ಸ್ ನಲ್ಲಿ ಬಂದು ನೋಡುವಾಗ ಅಜೇಂದ್ರ ಶೆಟ್ಟಿ ಕೊಲೆಯಾಗಿ ಬಿದ್ದಿರುವುದು ಕಂಡು ಬಂದಿದೆ.

ಇದೇ ವೇಳೆ ಅನೂಪ್‌ಗೆ ಫೋನ್ ಮಾಡಿದಾಗ ಆತನ ಮೊಬೈಲ್ ಸ್ವಿಚ್‌ ಆಫ್ ಆಗಿತ್ತು. ಬಳಿಕ ಸಮೀಪದ ಅಂಗಡಿ ಅವರನ್ನು ವಿಚಾರಿಸಿದಾಗ ಇವರಿಬ್ಬರು ರಾತ್ರಿ 8:30ರವರೆಗೆ ಫೈನಾನ್ಸ್ ನಲ್ಲಿ ಒಟ್ಟಿಗೆ ಇದ್ದರು ಎಂದು ತಿಳಿಸಿದ್ದಾರೆ.ಫೈನಾನ್ಸ್ ವ್ಯವಹಾರ ಹಾಗೂ ಹಣಕಾಸಿಗೆ ಸಂಬಂಧಿಸಿ ಅಜೇಂದ್ರನೊಂದಿಗೆ ಅನೂಪ್ ತಕರಾರು ಮಾಡಿರುವ ವಿಚಾರವನ್ನು ಅಜೇಂದ್ರ ತನ್ನ ಅಣ್ಣನಲ್ಲಿ ಹೇಳಿಕೊಂಡಿದ್ದನು. ಅಲ್ಲದೇ ಅಜೇಂದ್ರ ಇತ್ತೀಚೆಗೆ ಹೊಸದಾಗಿ ಖರೀದಿಸಿದ ಕಾರಿನ ಬಗ್ಗೆ ಕೂಡ ಅನೂಪ್‌ಗೆ ಅಸಮಾಧಾನ ಇತ್ತೆನ್ನಲಾಗಿದೆ.

 ಇದೇ ವೈಮನಸ್ಸಿನಿಂದ ಅನೂಪ್, ಅಜೇಂದ್ರನನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಹತ್ಯೆಯಾದ ಬಳಿಕ ಮೊಬೈಲ್‌ ಸ್ವಿಚ್ ಆಫ್‌ ಮಾಡಿ ತಲೆಮರೆಸಿಕೊಂಡಿದ್ದಲ್ಲದೇ ಪರಾರಿಯಾಗಲು ಅಜೇಂದ್ರ ಅವರ ಹೊಸ ಕಾರನ್ನೇ ಬಳಸಿಕೊಂಡಿದ್ದನು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಟೋಲ್‌ಗೇಟ್ ಗಳಲ್ಲಿ ಅಳವಡಿಸಿದ್ದ ಸಿಸಿ ಟಿವಿ ದೃಶ್ಯಾವಳಿಗಳ ಮೂಲಕ ಆರೋಪಿಯು ಉತ್ತರ‌ಕನ್ನಡ ಜಿಲ್ಲೆಯತ್ತ ಹೋಗಿರುವುದು ಖಚಿತಪಡಿಸಿಕೊಂಡಿದ್ದಾರೆ. ಕುಂದಾಪುರ ಉಪವಿಭಾಗ ವ್ಯಾಪ್ತಿಯ ಪೊಲೀಸರು‌ ಎರಡು‌ ತಂಡಗಳಾಗಿ ಆರೋಪಿಯ‌ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದು, ಕೊನೆಗೂ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಗೋವಾದಲ್ಲಿ ಬಂಧಿಸಿದ್ದಾರೆ. ಮೇಲ್ನೋಟಕ್ಕೆ ಹಣಕಾಸಿನ‌ ವ್ಯವಹಾರ ಹಾಗೂ‌ ಹೊಸ ಕಾರು ಖರೀದಿಯ ಬಗ್ಗೆ ವೈಷಮ್ಯದಿಂದಾಗಿ ಕೊಲೆ‌ ನಡೆಸಲಾಗಿದ್ದು, ಕೊಲೆಗೆ ನಿಖರ‌ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕ‌ ವಲಯದಿಂದ‌ ಶ್ಲಾಘನೆ ವ್ಯಕ್ತವಾಗಿದೆ.ಮೃತರು ತಂದೆ ತಾಯಿ, ಓರ್ವ ಸಹೋದರ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!