
ಕುಂದಾಪುರ: ಇಲ್ಲಿನ ಹೋಲಿ ರೋಜರಿ ಚರ್ಚ್ ಎದುರು ಶುಕ್ರವಾರ ಬೆಳಗಿನ ಜಾವ ಕಾರಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬನನ್ನು ಪಿಸ್ತೂಲ್ನಿಂದ ಗುಂಡಿಕ್ಕಿ ಬರ್ಬರ ಹತ್ಯೆಗೈದಿರುವ ಭೀಕರ ಘಟನೆ ನಡೆದಿದೆ.ಬಾರ್ಕೂರು ಕಚ್ಚೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್ (45) ಕೊಲೆಯಾದ ವ್ಯಕ್ತಿ.
ಘಟನೆಯ ವಿವರ: ಶುಕ್ರವಾರ ಬೆಳಗಿನ ಜಾವ ಸುಮಾರು 3:30ರ ಸುಮಾರಿಗೆ ಈ ರಕ್ತಸಿಕ್ತ ಕೃತ್ಯ ನಡೆದಿದೆ. ಐವನ್ ರಿಚರ್ಡ್ ಮಸ್ಕರೇನಸ್ ಅವರು ಕಾರಿನಲ್ಲಿ ಬಂದಿದ್ದ ವೇಳೆ, ಅಪರಿಚಿತ ಯುವಕನೊಬ್ಬ ಪಿಸ್ತೂಲ್ನಿಂದ ಏಕಾಏಕಿ ಗುಂಡು ಹಾರಿಸಿದ್ದಾನೆ. ಪರಿಣಾಮ ಐವನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿ ಯುವಕ ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾನೆ.
ಹಣಕಾಸಿನ ವೈಷಮ್ಯ ಶಂಕೆ: ಮೃತರ ವ್ಯವಹಾರಿಕ ಮತ್ತು ಹಣಕಾಸಿನ ಸಂಬಂಧಿತ ವೈಷಮ್ಯವೇ ಈ ಹತ್ಯೆಗೆ ಮೂಲ ಕಾರಣವೆಂದು ಶಂಕಿಸಲಾಗಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಯೋಜನೆ ರೂಪಿಸಿ ಈ ಕೃತ್ಯ ಎಸಗಿರಬಹುದು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕುಂದಾಪುರ ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (SOCO) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಿಂದ ಅಗತ್ಯ ಸಾಕ್ಷ್ಯಗಳನ್ನು ಕಲೆಹಾಕಲಾಗಿದ್ದು, ಪರಾರಿಯಾಗಿರುವ ಆರೋಪಿಯ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.


