ಬೆಂಗಳೂರು: ಧರಣಿ ನಿರತ ಸಾರಿಗೆ ನೌಕರರ ಜೊತೆಗೆ ಇಂದು ನಡೆದ ಸಭೆ ಯಶಸ್ಸು ಕಂಡಿದ್ದು, ಕಳೆದ ಮೂರು ದಿವಸದಿಂದ ನಡೆಸುತ್ತಿದ್ದ ರಾಜ್ಯ ವ್ಯಾಪ್ತಿ ಮುಷ್ಕರವನ್ನು ವಾಪಸ್ಸು ಪಡೆಯಲಾಗಿದೆ. ಈ ನಡುವೆ ಇಂದು ಸಂಜೆಯಿಂದಲೇ ಬಸ್ ಸಂಚಾರ ಆರಂಭವಾಗಿದೆ.
ಸಾರಿಗೆ ಸಚಿವ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಯೂನಿಯನ್ ಮುಖಂಡರ ಸಭೆ ನಡೆದಿದ್ದು, ಸಭೆಯಲ್ಲಿ ಸಾರಿಗೆ ನೌಕರರು ತಮ್ಮ ಮುಷ್ಕರ ವಾಪಸ್ ಪಡೆಯುವುದಾಗಿ ಘೋಷಿಸಿದ್ದಾರೆ.
ಸಭೆಯಲ್ಲಿ ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಗಿದೆ. 2020 ಜನವಯಿಂದ ವೇತನ ಪರಿಷ್ಕರಣೆ, ನೌಕರರಿಗೆ ಕಿರುಕುಳ ತಡೆಯುವುದು, ಕೋವಿಡ್ ನಿಂದ ಮೃತಪಟ್ಟ ಕುಟುಂಬಕ್ಕೆ 30 ಲಕ್ಷ ಪರಿಹಾರ ಸೇರಿದಂತೆ ಸಮಿತಿ ವರದಿ, ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಸರ್ಕಾರ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಆದರೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಸಭೆಯಲ್ಲಿ ಸರ್ಕಾರ ಸ್ಪಷ್ಟಪಡಿಸಿದೆ.
ಕಳೆದ 3 ದಿನಗಳಿಂದ ಸಾರಿಗೆ ನೌಕರರ ಮುಷ್ಕರ ಸ್ಥಗಿತಗೊಂಡಿದ್ದ ಬಸ್ ಸಂಚಾರ ಇದೀಗ ಮತ್ತೆ ಸಾಲು ಸಾಲು ಮಾತುಕತೆ ನಂತರ ಯೂನಿಯನ್ ಮುಖಂಡರ ಹಲವು ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪಿಗೆ ಸೂಚಿಸಿದ ಹಿನ್ನೆಲೆ ಇದೀಗ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ ಗಳು ಸಂಚಾರ ಆರಂಭಿಸಿದೆ.
ಯೂನಿಯನ್ ಕಡೆಯಿಂದ ನಮಗೆ ಸಂದೇಶ ಬಂದ ಬಳಿಕ ಬಸ್ ಸಂಚಾರ ಆರಂಭಿಸಿದ್ದೇವೆ, ಸಂಧಾನದಲ್ಲಿ ಏನೇನು ಮಾತುಕತೆ ಆಗಿದೆಯೋ ಗೊತ್ತಿಲ್ಲ, ಮೌಖಿಕ ಸಂದೇಶದ ಬಳಿಕ ಸಂಚಾರ ಆರಂಭಿಸಿದ್ದೇವೆ ಎಂದು ಸಾರಿಗೆ ನೌಕರರು ಹೇಳಿದ್ದಾರೆ.