ಬೆಳ್ತಂಗಡಿ : ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಆ.೧ ಮಳೆಯಿಂದ ಹಾನಿಗೊಳಗಾದ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಡ್ಡಡ್ಕ – ಪಡಂಗಡಿ ರಸ್ತೆ ಕುಸಿತದ ಸ್ಥಳ, ಗುರುವಾಯನಕೆರೆ ಮಸೀದಿಯ ತಡೆಗೋಡೆ ಕುಸಿತ ಸ್ಥಳ, ಲಾಯಿಲ ಗ್ರಾಮದ ಆಯಿಲ ಪ್ರದೇಶದ ರಸ್ತೆ ಕುಸಿತಕ್ಕೊಳಗಾದ ಸ್ಥಳ, ಮಳೆಯಿಂದಾಗಿ ಬಿರುಕು ಬಿಟ್ಟಿರುವ ಸವಣಾಲು ಪಿಜಕಲ ರಸ್ತೆಯ ಪ್ರದೇಶ, ಮರೋಡಿ, ವೇಣೂರು, ಆರಂಬೋಡಿ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಹಿಲನ್ ಮತ್ತು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರಿಗೆ ವಿವರಿಸಿ, ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿಕೊಂಡರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮಳೆಯಿಂದಾದ ಹಾನಿಗೆ ಸೂಕ್ತ ಪರಿಹಾರವನ್ನು ನೀಡುವಂತೆ ಸರಕಾರಕ್ಕೆ ಮನವಿಯನ್ನು ಮಾಡಿದ್ದೇನೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜರು ಜನರ ಕಷ್ಟದ ಸಮಯದಲ್ಲಿ ಜನರ ಜೊತೆ ಇರಬೇಕಿತ್ತು ಆದರೆ ಅವರು ಬೆಂಗಳೂರಿನಲ್ಲಿದ್ದಾರೆ ಎಂದು ಟೀಕಿಸಿದರು.