ಉಡುಪಿ : ಹೋಂ ಕ್ವಾರಂಟೈನ್ನಿಂದ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಸಾಲಿಗ್ರಾಮ ಸಮೀಪ ಗುಂಡ್ಮಿ ಮಾಣಿಕಟ್ಟೆಯ ಬಾಲಕ ಹೋಂ ಕ್ವಾರಂಟೈನ್ನಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಈತ ವಿವೇಕ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದು, ಈತನಿಗೆ ಹೋಂ ಕ್ವಾರಂಟೈನ್ನಿಂದ ತಾನು ಎಂದಿನಂತೆ ಆಟವಾಡಲು ಹೋಗಲಾಗುತ್ತಿಲ್ಲ ಎಂದು ಬೇಸರವಾಗಿತ್ತು. ಆತನ ತಾಯಿ ಆಟವಾಡಲು ಹೋಗದಂತೆ ಮಗನಿಗೆ ಹೇಳುತ್ತಿದ್ದರು. ಚೇಂಪಿಯಲ್ಲಿ ಮನೆಗೆಲಸಕ್ಕೆ ಹೋಗುತ್ತಿದ್ದ ತಾಯಿ ಮನೆ ಮಾಲಕರಿಗೆ ಕೋವಿಡ್ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಪ್ರಾಥಮಿಕ ಸಂಪರ್ಕದಲ್ಲಿದ್ದ ಇವರ ಮನೆಯವರನ್ನು ಹೋಂ ಕ್ವಾರಂಟೈನ್ನಲ್ಲಿರಲು ಅಧಿಕಾರಿಗಳು ಸೂಚಿಸಿದ್ದರು.
ಕಾರ್ತಿಕ್ ಮತ್ತು ಆತನ ತಾಯಿ ಕಳೆದ ಏಳು ದಿನಗಳಿಂದ ಮನೆಯಲ್ಲೇ ಇದ್ದರು. ಹೊರಗೆ ಬರುತ್ತಿರಲಿಲ್ಲ. ಇದರಿಂದ ಕಾರ್ತಿಕ್ ಬಹಳ ನೊಂದಿದ್ದ ಜೊತೆಗೆ ಕೋವಿಡ್ ಕುರಿತು ಭಯಗೊಂಡಿದ್ದ ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.