ಮುಂಬೈ – ಕರಾವಳಿ ಜಿಲ್ಲೆಗಳ ಜನಮನದ ಜೀವನಾಡಿಯಾಗಿರುವ ಕೊಂಕಣ ರೈಲ್ವೆ ಸೇವೆ ಜೂ.10ರಿಂದ ಆರಂಭವಾಗಲಿದೆ ಎಂದು ಕೊಂಕಣ್ ರೈಲ್ವೆ ಮೂಲಗಳಿಂದ ತಿಳಿದು ಬಂದಿದೆ . ಲಾಕ್ಡೌನ್ನಿಂದಾಗಿ ಸ್ಥಗಿತಗೊಂಡಿದ್ದ ರೈಲು ಸೇವೆಯನ್ನು ಹಂತ ಹಂತವಾಗಿ ಆರಂಭಿಸಲು ಕೊಂಕಣ ರೈಲ್ವೆ ಅಕಾರಿಗಳು ಮುಂದಾಗಿದ್ದು, ಜೂ.10ರಿಂದ ಆಗಸ್ಟ್ 31ರ ವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ.
ಮುಂಗಾರು ಮಳೆ ಹಿನ್ನೆಲೆಯಲ್ಲಿ ರೈಲ್ವೆ ಹಳಿಗಳ ಸುರಕ್ಷತಾ ಕೆಲಸಗಳು ನಡೆಯುತ್ತಿವೆ. ಮುಂಬೈನ ಕೋಲಾಡ್ನಿಂದ ಮಂಗಳೂರಿನ ತೋಕೂರುವರೆಗೆ 740ಕಿ.ಮೀ. ಹಳಿಯುದ್ದಕ್ಕೂ ಮಳೆ ನೀರು ಸುಗಮವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಲಾಗುತ್ತಿದೆ.
ಮರ-ಗಿಡಗಳು ಹಳಿಗಳ ಮೇಲೆ ಬೀಳದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಮತ್ತು ಗುಡ್ಡ ಕುಸಿತ ಮತ್ತಿತರ ಅವಘಡಗಳನ್ನು ತ್ವರಿತಗತಿಯಲ್ಲಿ ಪರಿಹರಿಸಲು ಕೂಡ ಕ್ರಮ ಕೈಗೊಳ್ಳಲಾಗಿದೆ.
ಇನ್ನು ಪ್ರಯಾಣಿಕರ ಸುರಕ್ಷತೆಗೂ ಕೂಡ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಸುಮಾರು 974 ನೌಕರರನ್ನು ಹಳಿಗಳ ಭದ್ರತೆಗಾಗಿ ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿರುವ ಸ್ಥಳಗಳಲ್ಲಿ 24 ಗಂಟೆಗಳ ಕಾಲ ಭದ್ರತಾ ಸಿಬ್ಬಂದಿಗಳ ನಿಗಾ ಇಡಲಾಗಿದೆ.
ರೈಲು ಪ್ರತಿ ಗಂಟೆಗೆ 40ಕಿ.ಮೀ. ವೇಗದಲ್ಲಿ ಮಾತ್ರ ಸಂಚರಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಲಾಗಿದೆ.